ಮೈಸೂರು: ಮೈಸೂರು- ಮಾನಂದವಾಡಿ ಹೆದ್ದಾರಿಯ ಕಂಚಮಳ್ಳಿ ಗೇಟ್ ಬಳಿ 4 ನೇ ದಿನ ವೂ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಹಂಪಾಪುರ ಅರಣ್ಯ ಪ್ರದೇಶ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡರ ಫಾರಂಹೌಸ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವುದು ಜನರಲ್ಲಿ ಭೀತಿ ಮೂಡಿಸಿದೆ.
ಮೂರ್ನಾಲ್ಕು ದಿನಗಳ ಹಿಂದೆಯೇ ಸ್ಥಳೀಯರು ಚಿರತೆಯನ್ನು ಕಂಡಿದ್ದರು. ಆದರೆ ಚಿರತೆ ಓಡಾಟದ ಯಾವುದೇ ದೃಶ್ಯಗಳು ಸಿಕ್ಕಿರಲಿಲ್ಲ. ಬುಧವಾರ ಬೆಳಿಗ್ಗೆ ಅಂಬ್ಯುಲೆನ್ಸ್ ಚಾಲಕ ರಾಜೇಶ್ ಎಂಬುವವರು ಚಿರತೆ ರಸ್ತೆ ದಾಟುತ್ತಿರುವ ದೃಶ್ಯವನ್ನು ಚಿತ್ರೀಕರಿಸಿದ್ದು ಚಿರತೆಯ ಇರುವಿಕೆಗೆ ಅಧಿಕೃತ ಸಾಕ್ಷ್ಯ ಸಿಕ್ಕಿದೆ.
ಕಳೆದ ನಾಲ್ಕು ದಿನಗಳಿಂದಲೂ ಚಿರತೆ ಕಂಚಮಳ್ಳಿ ಗೇಟ್ ಸ್ವಾಗತ ಕಮಾನು ಬಳಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸ್ಥಳೀಯರು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ. ಇದೀಗ ಹಂಪಾಪುರ ಅರಣ್ಯ ಪ್ರದೇಶದಲ್ಲಿ ಬೋನು ಇಡುವ ಮೂಲಕ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಕಂಚಮಳ್ಳಿ, ಚಿಕ್ಕನಂದಿ ಹಿರೇನಂದಿ ಭಾಗದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ.
” ನನ್ನ ಫಾರಂ ಹೌಸ್ ಬಳಿ ಕಳೆದ 3 ದಿನದಿಂದಲೂ ಚಿರತೆ ಸಂಚರಿಸುತ್ತಿದ್ದು ಈಗಾಗಲೇ ಅರಣ್ಯ ಇಲಾಖೆಯವರು ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಸಾರ್ವಜನಿಕರು ಆದಷ್ಟು ಜಾಗರೂಕತೆಯಿಂದ ಓಡಾಡಬೇಕು.ಜೊತೆಗೆ ಚಿರತೆ ಹಿಡಿಯುವ ತನಕ ರಾತ್ರಿ ವೇಳೆ ಸಂಚರಿಸದೇ ಇರುವುದು ಉತ್ತಮ – ಎಂದು ಎಂಎಲ್ ಸಿ ಸಿ.ಎನ್ ಮಂಜೇಗೌಡ ಜನರಿಗೆ ಮನವಿ ಮಾಡಿದ್ದಾರೆ.
” ನಾವು ಚಿರತೆ ಕಂಡ ಮೊದಲ ದಿನವೇ ಬೋನು ಇಟ್ಟು ಸೆರೆ ಹಿಡಿಯುವ ಕಾರ್ಯಚರಣೆ ಆರಂಭಿಸಿದ್ದೇವೆ. ಆದರೆ ನಮ್ಮ ಸಿಬ್ಬಂದಿ ಕಣ್ಣಿಗೆ ಚಿರತೆ ಕಾಣಿಸಿಲ್ಲ. ರಸ್ತೆಯಲ್ಲಿ ಓಡಾಡುವವರಷ್ಟೇ ಚಿರತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಯಚರಣೆ ಇನ್ನಷ್ಟು ಚುರುಕುಗೊಳಿಸಿ ಚಿರತೆ ಸೆರೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಂಪಾಪುರ ಅರಣ್ಯ ಆರ್ ಎಫ್ ಓ ನೀತಾ ಡಿ ತಿಳಿಸಿದ್ದಾರೆ.





