Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

200 ಯೂನಿಟ್ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ಗೆ ಚಾಲನೆ

ಕಲಬುರ್ಗಿ : ಪಂಚಖಾತ್ರಿಗಳಲ್ಲಿ ಅತ್ಯಂತ ಮಹತ್ವರವಾಗಿರುವ ಗೃಹಜ್ಯೋತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಅಧಿಕೃತವಾದ ಚಾಲನೆ ನೀಡಿದರು.

ಕಲಬುರ್ಗಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್, ಪೌರಾಡಳಿತ ಸಚಿವ ರಹೀಂಖಾನ್ ಸೇರಿದಂತೆ ಸಂಪುಟದ ಬಹಳಷು ಸಚಿವರು ಭಾಗವಹಿಸಿದ್ದರು.

ಜುಲೈ 1 ರಿಂದ ಬಳಕೆ ಮಾಡಿರುವ 200 ಯುನಿಟ್ ಒಳಗಿನ ವಿದ್ಯುತ್‍ಗೆ ಶುಲ್ಕ ವಿನಾಯಿತಿ ನೀಡುವ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಈಗಾಗಲೇ ಜಾರಿಯಲ್ಲಿದೆ. ಆ.1 ರಿಂದ ನೀಡಲಾಗುತ್ತಿರುವ ವಿದ್ಯುತ್ ಬಿಲ್‍ಗಳಲ್ಲಿ ಶೂನ್ಯ ಶುಲ್ಕ ನಮೂದಾಗುತ್ತಿದ್ದು, ಸಾರ್ವಜನಿಕರು ಖುಷಿಯಾಗಿದ್ದಾರೆ.

ರಾಜ್ಯದಲ್ಲಿರುವ 2.16 ಕೋಟಿ ಆರಾರ್ ಸಂಖ್ಯೆಗಳಿದ್ದು, ಅದರಲ್ಲಿ 2.14 ಕೋಟಿ ಸಂಪರ್ಕಗಳು ಗೃಹಜ್ಯೋತಿಗೆ ಅರ್ಹತೆ ಪಡೆದಿದ್ದವು. ನೋಂದಾವಣಿ ಆಧಾರದ ಮೇಲೆ ಸೌಲಭ್ಯ ದೊರೆಯುತ್ತಿದ್ದು, ಈವರೆಗೂ 1.43 ಕೋಟಿ ಫಲಾನುಭವಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ಬಳಿಕ ಅಷ್ಟೂ ಗ್ರಾಹಕರು ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಇಂಧನ ಇಲಾಖೆ ಘೋಷಿಸಿದೆ.

ಆಗಸ್ಟ್‌ ನಲ್ಲಿ ಈ ಗ್ರಾಹಕರಿಗೆ ನೀಡಲಾಗಿರುವ ಬಿಲ್‍ಗಳಿಗೆ ಯಾವುದೇ ಶುಲ್ಕ ಸಂಗ್ರಹಿಸುತ್ತಿಲ್ಲ. ಬದಲಾಗಿ ರಾಜ್ಯಸರ್ಕಾರ ವಿದ್ಯುತ್ ಶುಲ್ಕದ ಬಾಬ್ತನ್ನು ಎಸ್ಕಾಂಗಳಿಗೆ ಸಬ್ಸಿಡಿ ರೂಪದಲ್ಲಿ ಪಾವತಿ ಮಾಡಲಿದೆ.

ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷ ಪಂಚಖಾತ್ರಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಜೂನ್ 11 ರಿಂದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಸುಮಾರು 12 ಸಾವಿರ ಕೋಟಿ ರೂ. ಮೊತ್ತದ ಗೃಹಜ್ಯೋತಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.

ಬಿಪಿಎಲ್ ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜುಲೈ 1 ರಿಂದಲೇ ಅನುಷ್ಠಾನಗೊಳ್ಳುತ್ತಿದೆ. ಸದ್ಯಕ್ಕೆ ಅಕ್ಕಿ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪಾಲಿನ 5 ಕೆ.ಜಿ.ಗೆ 170 ರೂ. ನಂತೆ 1 ಕೋಟಿ ಕಾರ್ಡುದಾರರಿಗೆ ಕಳೆದ ತಿಂಗಳು 556 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಈ ತಿಂಗಳಿನಲ್ಲಿ ಹೊಸ ಕಾರ್ಡುಗಳ ನೋಂದಣಿಗೆ ಅವಕಾಶ ನೀಡಲಾಗುತ್ತಿದ್ದು, ಮತ್ತಷ್ಟು ಫಲಾನುಭವಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.

ಬಹುಷಃ ಆಗಸ್ಟ್ ತಿಂಗಳಿನಲ್ಲೂ ಫಲಾನುಭವಿಗಳಿಗೆ ನಗದು ರೂಪದಲ್ಲೇ ಹಣ ಪಾವತಿಯಾಗುವ ಸಾಧ್ಯತೆಯಿದ್ದು, ಬಳಿಕ ಸೆಪ್ಟೆಂಬರ್‌ನಿಂದ ಅಕ್ಕಿ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಅತೀ ಹೆಚ್ಚು ಅನುದಾನ ಬಯಸುವ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಇದೇ ತಿಂಗಳ 16 ಅಥವಾ 17 ರಂದು ಅರ್ಹ ಫಲಾನುಭವಿಗಳ ಖಾತೆಗಳಿಗೆ ತಲಾ 2 ಸಾವಿರ ರೂ. ಜಮಾ ಮಾಡಲಾಗುತ್ತದೆ.

ಯುವನಿ ಯೋಜನೆಗೆ ಡಿಸೆಂಬರ್ ಬಳಿಕ ಅರ್ಜಿ ಆಹ್ವಾನ ಮಾಡುವ ಸಾಧ್ಯತೆಗಳಿವೆ. ಒಂದು ಹಂತದಲ್ಲಿ ಬಿಜೆಪಿ ಪಂಚಖಾತ್ರಿ ಯೋಜನೆಗಳಿಗೆ ಷರತ್ತುಗಳಿಲ್ಲದೆ ಅನುಷ್ಠಾನಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿತ್ತು.ಎಲ್ಲಾ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿದ್ದು, ಜನರಿಗೆ ತಲುಪಲಾರಂಭಿಸಿದ ಬಳಿಕ ಅವೈಜ್ಞಾನಿಕ ಪಂಚಖಾತ್ರಿ ಯೋಜನೆಗಳ ಜಾರಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲಿದೆ ಟೀಕೆ ಮಾಡಲಾರಂಭಿಸಿದೆ.

ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಟೀಕೆಗೆ ಎದುರೇಟು ನೀಡಿದ್ದು, ಕಾಂಗ್ರೆಸ್ ಬಡವರಿಗೆ ಯೋಜನೆಗಳನ್ನು ರೂಪಿಸುತ್ತಿದೆ. ಬಿಜೆಪಿ ಶ್ರೀಮಂತರ ಪರವಾಗಿದೆ ಎಂಬ ವಾಗ್ದಾಳಿ ನಡೆಸಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಆದ್ಯತೆಯಾಗಿಟ್ಟುಕೊಂಡು ಗೃಹಜ್ಯೋತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರಿ ಕಾರ್ಯಕ್ರಮವಾದರೂ ಬಹುತೇಕ ಪಕ್ಷದ ಪ್ರಚಾರದ ವೇದಿಕೆಯನ್ನಾಗಿ ಪರಿವರ್ತಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖ ಅತಿಥಿಗಳು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದೇ ಹೆಚ್ಚಾಗಿ ಕಂಡುಬಂದಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ