ಪ್ರಕಾಶ್ ರೆಡ್ಡಿ ಅವರೀಗ ಓಂ ಸಾಯಿಪ್ರಕಾಶ್. ಕನ್ನಡ ಚಿತ್ರಗಳ ಮೂಲಕವೇ ಸ್ವತಂತ್ರ ನಿರ್ದೇಶಕರಾದ ಅವರ ನೂರನೇ ಚಿತ್ರ ‘ಶ್ರೀ ಸತ್ಯಸಾಯಿ ಅವತಾರ’. ಈ ಹಿಂದೆ ಅವರು ಶಿರಡಿ ಸಾಯಿಬಾಬ ಜೀವನಕಥೆಯನ್ನು ತೆರೆಯ ಮೇಲೆ ತಂದಿದ್ದರು. ಅವರೇ ಬಾಬಾ ಆಗಿ ನಟಿಸಿದ್ದರು ಕೂಡ. ಮೊನ್ನೆ ಅವರ ಹೊಸ ಕನ್ನಡ ಚಿತ್ರದ ಶೀರ್ಷಿಕೇ ಅನಾವರಣ ಕಾರ್ಯಕ್ರಮ. ಅದರ ಆಹ್ವಾನಪತ್ರಿಕೆಯಲ್ಲಿ ಮಠಾಧಿಪತಿಗಳು, ಸಚಿವರು, ಗಣ್ಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿಯ ಹೆಸರುಗಳಿದ್ದವು. ಬಂದವರು ಬೆರಳೆಣಿಕೆಯ ಮಂದಿ. ಅವರಲ್ಲಿ ಸಮಯಕ್ಕೆ ಸರಿಯಾಗಿ ಬಂದವರು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ. ‘ನಾನು ಹತ್ತಾರು ಬಾರಿ ಪುಟ್ಟಪರ್ತಿಗೆ ಹೋಗಿ ಸತ್ಯಸಾಯಿಬಾಬಾರ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಪುಟ್ಟಪರ್ತಿಯ ಸಾಯಿಬಾಬಾ ಮಹಿಮೆಗಳನ್ನು ‘ಶ್ರೀ ಸತ್ಯಸಾಯಿ ಅವತಾರ’ ಮೂಲಕ ಹೇಳಬಯಸಿದ್ದಾರೆ ಸಾಯಿಪ್ರಕಾಶ್. ಮಹರ್ಷಿ ಆನಂದ ಗುರೂಜಿ, ಸಾಯಿಗೋಲ್ಡ್ ಸರವಣ, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಭಾ.ಮ.ಹರೀಶ್, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಮುಂತಾದವರು ಆತಿಥಿಗಳಾಗಿ ಪಾಲ್ಗೊಂಡಿದ್ದರು. ಗಾಂಧೀಜಿಯವರು ಹೇಳಿದ, ಸಾಯಿಬಾಬ ಅವರೂ ಹೇಳಿದ್ದಾರೆ ಎನ್ನಲಾದ ‘ನನ್ನ ಜೀವನವೇ ನನ್ನ ಸಂದೇಶ’ ಸಾಲನ್ನು ಸಾಯಿಬಾಬ ಚಿತ್ರದ ಹೆಸರಿಗೆ ಸೇರಿಸಿಕೊಂಡಿದ್ದಾರೆ ಸಾಯಿಪ್ರಕಾಶ್!