Mysore
20
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಪುರುಷರ ಲಾಲಸೆಗಳಿಗೆ ಬಲಿಯಾಗದಿರಿ

ಅಂಜಲಿ ರಾಮಣ್ಣ

ವಕ್ಛ್‌ಗೆ ಸಂಬಂಧಪಟ್ಟ ಕಾನೂನು ರಾಷ್ಟ್ರಪತಿಯಿಂದ ಅನುಮೋದನೆ ಪಡೆದು ಜಾರಿಗೆ ಬಂದಿದೆ. ಈ ಕಾನೂನಿ ನೊಡನೆ ಸಹಮತ ಇಲ್ಲದ ಭಾರತ ದೇಶದ ಯಾವುದೇ ಪ್ರಜೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ಸಂವಿಧಾನವು ಅವಕಾಶ ನೀಡಿದೆ. ಹೀಗಿರುವಾಗ ಜನರು ಕಾನೂನಾತ್ಮಕ ಮಾರ್ಗ ವನ್ನು ಅನುಸರಿಸದೆ ದಂಗೆ ಏಳಬೇಕು, ರಕ್ತಪಾತ ಮಾಡ ಬೇಕು, ಸಾರ್ವ ಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಯುಂಟು ಮಾಡಬೇಕು, ಅರಾಜಕತೆ ಉಂಟು ಮಾಡಬೇಕು ಎಂದು ರಾಜಕಾರಣಿಯೊಬ್ಬರು ಕರೆಕೊಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸಾಮಾನ್ಯವಾಗಿ ಸಾಮಾಜಿಕ ಗಲಭೆಗಳನ್ನು ಹುಟ್ಟುಹಾಕಲು ಹೆಂಗಸರು ಮತ್ತು ಯುವಕರನ್ನು ಉದ್ವೇಗಕ್ಕೆ ಒಳಪಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವುದು ಪುರುಷರ ಹಳೆಯ ದುಶ್ಚಟವೇ ಆಗಿದೆ. ಆದರೆ ಯಾರದ್ದೋ ಮಾತುಗಳನ್ನು ಕೇಳಿಕೊಂಡು ಅದರಂತೆ ಸಮಾಜಕ್ಕೆ ತೊಂದರೆಯಾಗುವಂತೆ ನಡೆದುಕೊಂಡರೆ ಅದನ್ನು ಅಪರಾಧ ಎಂದಷ್ಟೇ ನೋಡಲಾಗುತ್ತದೆ. ಹೆಂಗಸರು ಎನ್ನುವ ಮಾಫಿ ಸಿಗುವುದಿಲ್ಲ.

ಭಾರತೀಯ ನ್ಯಾಯ ಸಂಹಿತೆ ೨೦೨೩ ಈ ಕಾಯಿದೆಯ ಸೆಕ್ಷನ್ ೧೫೨ರ ಅಡಿಯಲ್ಲಿ ಈ ದೇಶದ ಸಾರ್ವಭೌಮತ್ವಕ್ಕೆ, ಸುರಕ್ಷತೆಗೆ ಧಕ್ಕೆ ತರುವಂತಹ , ಅರಾಜಕತೆ ಉಂಟು ಮಾಡ ಬಹುದಾದಂತಹ, ಸರ್ಕಾರವನ್ನು ಹಿಂಸೆಯ ಮೂಲಕ ಉರುಳಿಸುವಂತಹ ಕೆಲಸಕ್ಕೆ, ಭಾಷಣಗಳ, ಮಾತುಗಳ, ವಾಟ್ಸಾಪ್ ಸಂದೇಶಗಳ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಪ್ರಚೋದನೆ ನೀಡುವುದನ್ನು ಮತ್ತಿತರೆ ಚಟುವಟಿಕೆಗಳನ್ನು (ಸರಿಸುಮಾರು ಭಯೋತ್ಪಾ ದನೆ ಚಟುವಟಿಕೆ ಎಂದು ಪರಿಗಣಿಸಿ) ಅಪರಾಧ ಎಂದು ಗುರುತಿಸಲಾಗಿದೆ. ಜಾಮೀನು ರಹಿತ ಈ ಅಪರಾಧಕ್ಕೆ ೭ ವರ್ಷಗಳ ಜೈಲುವಾಸದಿಂದ ಜೀವಾವಧಿ ಶಿಕ್ಷೆ ಕೂಡ ಇದೆ.

ಆ ಪ್ರಚೋದನೆಯನ್ನು ಜಾರಿಗೆ ತರಲು ಧನ ಸಹಾಯ, ತಾಂತ್ರಿಕತೆಯ ಬೆಂಬಲ, ಸ್ಥಳ ನೀಡುವಿಕೆ, ಜನರನ್ನು ಗುಂಪುಗೂಡಿಸುವಿಕೆ, ಆಯುಧಗಳ ಸಂಗ್ರಹಣೆ ಮತ್ತು ಬಳಕೆ ಹಾಗೂ ಇದಕ್ಕೆ ಸಂಬಂಧಪಟ್ಟ ಮತ್ತ್ಯಾವುದೇ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಮುಂದಾದರೆ ಮತ್ತು ಧಾರ್ಮಿಕ ಕಲಹಗಳನ್ನು ಉಂಟು ಮಾಡಿದರೆ ಅದನ್ನು ಸಹ ಇದೇ ಕಾನೂನಿನ ಸೆಕ್ಷನ್ ೧೯೧, ೨೭೦ ಮತ್ತು ೨೯೨ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಗುರುತಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಹಾಗಾದರೆ ದೇಶದಲ್ಲಿ ನಡೆಯುವ ತಪ್ಪುಗಳೆಡೆಗೆ ಪ್ರಶ್ನೆ ಒಡ್ಡುವುದೇ ಅಪರಾಧ ಎಂದಲ್ಲ. ಸರ್ಕಾರ ಮತ್ತು ದೇಶ ಇವರೆಡರ ನಡುವಿನ ವ್ಯತ್ಯಾಸ ತಿಳಿದುಕೊಂಡು ನಮ್ಮ ಖಂಡನೆ ಯಾವುದರ ಕಡೆಗೆ ಇರಬೇಕು ಮತ್ತು ‘ಹೇಗೆ’ ಇರಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ. ಮಹಿಳೆಯರು ಮತ್ತು ಯುವಕರು ಯಾರದ್ದೋ ಮಾತಿನಿಂದ ಪ್ರಚೋದನೆಗೊಂಡು ಅಥವಾ ಒತ್ತಡಕ್ಕೆ ಕಟ್ಟುಬಿದ್ದು ಇಂತಹ ಅಪರಾಧ ಕೃತ್ಯಕ್ಕೆ ಕೈ ಹಾಕಿ ಕುಟುಂಬದ ವರ್ತಮಾನ ಮತ್ತು ಭವಿಷ್ಯವನ್ನು ಹಾಳುಗೆಡಹುವ ಮೊದಲು ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಲು ಯಾರಾದರೂ ಬಲವಂತ ಪಡಿಸುತ್ತಿದ್ದರೆ ಅವರ ಮೇಲೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.

 (ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

Tags:
error: Content is protected !!