Mysore
25
overcast clouds
Light
Dark

ಹೊರೆಯಾಗುತ್ತಿದೆಯೇ ಹೈನುಗಾರಿಕೆ?

ಹಾಲಿನ ದರ ಏರಿಕೆಯಲ್ಲಿ ಕೆಎಂಎಫ್-ಸರ್ಕಾರದ ಹಗ್ಗಜಗ್ಗಾಟ; ೨ ರೂ. ಹೆಚ್ಚಳದ ನಿರೀಕ್ಷೆ

ಲೀಟರ್ ಹಾಲಿಗೆ ೩ ರೂ. ಹೆಚ್ಚಳ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಕೆಲ ದಿನಗಳ ಹಿಂದಷ್ಟೇ ಕೆಎಂಎಫ್ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಸರ್ಕಾರ ಖರೀದಿದಾರರ ಹಿತದೃಷ್ಟಿಯಿಂದ ಇದಕ್ಕೆ ತಡೆ ತಂದಿದ್ದು, ಒಂದು ಸುತ್ತಿನ ಸಭೆಯನ್ನೂ ನ.೨೦ ರಂದು ನಡೆಸಿದೆ. ಆದರೆ ದರ ಏರಿಕೆಯ ಬಗ್ಗೆ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರಿಗೂ ಅನುಕೂಲ ಆಗಬೇಕು, ಗ್ರಾಹಕರಿಗೂ ಹೊರೆಯಾಗಬಾರದು ಎನ್ನುವ ಸೂತ್ರ ಹೇಳಿ ಮತ್ತೊಮ್ಮೆ ಕೆಎಂಎಫ್‌ನಿಂದ ಪ್ರಸ್ತಾವನೆಯನ್ನು ಬಯಸಿದ್ದಾರೆ.

ರಾಜ್ಯದಲ್ಲಿ ಪ್ರತಿ ದಿನ ಅಂದಾಜು ೧ ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಮಂಡ್ಯ ಮತ್ತು ಮೈಸೂರು ಒಕ್ಕೂಟದಲ್ಲಿಯೇ ಅಧಿಕ ಪ್ರಮಾಣ ಹಾಲು ಉತ್ಪಾದನೆಯಾಗುತ್ತಿದೆ. ೧ ಕೋಟಿ ಲೀ. ಹಾಲಿನಲ್ಲಿ ೪೫ ಲಕ್ಷ ಲೀ. ಮಾತ್ರ ಮಾರಾಟವಾಗುತ್ತಿದ್ದು, ಉಳಿದ ೫೫ ಲಕ್ಷ ಲೀ. ಹಾಲಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ನಂದಿನಿ ಮಾರಾಟ ಮಾಡುತ್ತಿದೆ. ಉತ್ತಮ ಗುಣಮಟ್ಟ, ಸಮರ್ಥ ಸಂಪರ್ಕ ಜಾಲ ಹೊಂದಿರುವ ಕೆಎಂಎಫ್ ಹಾಲಿನ ದರವನ್ನು ೩ ರೂ. ಹೆಚ್ಚಳ ಮಾಡಿ ಅದನ್ನು ನೇರವಾಗಿ ರೈತರಿಗೆ ವರ್ಗ ಮಾಡುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ರಾಜ್ಯದ ೧೬ ಒಕ್ಕೂಟಗಳ ಬೆಂಬಲವೂ ದೊರೆತಿತ್ತು. ಆದರೆ ಸರ್ಕಾರ ಇದಕ್ಕೆ ತಾತ್ಕಾಲಿಕ ತಡೆ ತಂದಿತ್ತು. ಈ ಸಂಬಂಧ ನ. ೨೦ರ ಭಾನುವಾರ ಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೆಎಂಎಫ್ ಅಧ್ಯಕ್ಷರ ಸಭೆ ನಡೆದಿದೆ. ಆದರೆ ಅಂತಿಮ ತೀರ್ಮಾನ ಹೊರ ಬಿದ್ದಿಲ್ಲ. ಇದು ರೈತರ ನೀರಿಕ್ಷೆಯನ್ನು ಹುಸಿ ಮಾಡಿದೆ.

ಹೆಚ್ಚಿರುವ ಅಗತ್ಯ ವಸ್ತುಗಳ ಬೆಲೆ, ಪಶು ಆಹಾರ, ಸಾಗಣೆ ವೆಚ್ಚ, ಕೂಲಿ ಹೆಚ್ಚಳದಿಂದ ನಷ್ಟವಾಗುತ್ತಿದೆ. ಅಲ್ಲದೇ ಸರ್ಕಾರದಿಂದ ನೀಡಲಾಗುತ್ತಿದ್ದ ೫ ರೂ. ಪ್ರೋತ್ಸಾಹ ಧನವೂ ೬ ತಿಂಗಳಿನಿಂದ ಬಂದಿಲ್ಲ, ಇದರಿಂದ ಹೈನುಗಾರಿಕೆ ಹೊರೆಯಾಗುತ್ತಿದೆ ಎನ್ನುತ್ತಾರೆ ರೈತರು.

ಹೆಚ್ಚಿನ ಕುಟುಂಬಗಳು ಈಗಲೂ ಹೈನುಗಾರಿಕೆಯಿಂದಲೇ ಮುನ್ನಡೆಯುತ್ತಿವೆ. ಈಗ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಿವೆ. ಪಶು ಆಹಾರದ ಬೆಲೆ ಹೆಚ್ಚಿದೆ. ಅತಿ ವೃಷ್ಟಿಯಿಂದಾಗಿ ರಾಸುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ಕಾಲು ಬಾಯಿ ಜ್ವರ, ಚರ್ಮ ಗಂಟು ರೋಗ, ಕಾಡು ಪ್ರಾಣಿಗಳ ಹಾವಳಿಯಿಂದ ರಾಸುಗಳು ಸಾವಿಗೀಡಾಗುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದ್ದು, ಹಾಲಿನ ದರ ಏರಿಕೆ ಮಾಡಬೇಕು ಎಂಬುದು ಅವರ ವಾದ. ಇದಕ್ಕೆ ಪೂರಕವಾಗಿ ಮೈಮುಲ್, ಮನ್‌ಮುಲ್, ಚಾಮುಲ್ ಸೇರಿ ಎಲ್ಲ ೧೬ ಒಕ್ಕೂಟಗಳು ಕೆಎಂಎಫ್ ಅನ್ನು ದರ ಹೆಚ್ಚಳಕ್ಕೆ ಒತ್ತಾಯಿಸಿದ್ದವು. ಹೀಗಾಗಿ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿ ಲೀ. ಹಾಲಿಗೆ ೩ ರೂ. ಹೆಚ್ಚಳ ಮಾಡಿ ಅದನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಇದು ಜಾರಿಗೆ ಬರಲು ಅಂತಿಮವಾಗಿ ಸರ್ಕಾರದ ಗ್ರೀನ್ ಸಿಗ್ನಲ್ ಬೇಕೇ ಬೇಕಿದ್ದು, ಸಭೆಯ ನಂತರ ಒಪ್ಪಿಗೆ ಸಿಗಲಿದೆ ಎನ್ನುವ ವಿಶ್ವಾಸವಿತ್ತು. ಆದರೆ ಅಲ್ಲಿಯೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.

ಸಿಎಂ ಸೂತ್ರ

ಒಂದು ಕಡೆ ಹೈನುಗಾರರ ಹಿತವೂ ಮುಖ್ಯ, ಗ್ರಾಹಕರ ಜೇಬಿಗೂ ಹೊರೆಯಾಗಬಾರದು ಎನ್ನುವುದು ಸರ್ಕಾರದ ನಿಲುವು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್‌ಗೆ ಸೂತ್ರವೊಂದನ್ನು ತಿಳಿಸಿದ್ದು, ಉತ್ಪಾದನಾ ವೆಚ್ಚ ಕಡಿತಕ್ಕೆ ಕೆಎಂಎಫ್ ಮುಂದಾಗಬೇಕು. ಗ್ರಾಹಕರು ಮತ್ತು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಸೂಕ್ತವಾದ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

 ಸಿಎಂ ಒಪ್ಪಿಗೆ ಸೂಚಿಸಬೇಕು

ಲೀಟರ್‌ಗೆ ೫ ರೂ. ನಷ್ಟ ಹಾಲಿನದ ದರ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬಹು ದಿನಗಳ ಬೇಡಿಕೆ. ಇದನ್ನು ಕೆಎಂಎಫ್ ಅಧ್ಯಕ್ಷರಿಗೆ ತಿಳಿಸುತ್ತಲೇ ಬಂದಿದ್ದೆವು. ಈ ಬಗ್ಗೆ ಅಧ್ಯಕ್ಷರು ನಿರ್ಣಯ ಕೈಗೊಂಡು ೩ ರೂ. ಹೆಚ್ಚಳಕ್ಕೆ ಮುಂದಾಗಿದ್ದರು. ಮುಖ್ಯಮಂತ್ರಿಗಳು ಇದಕ್ಕೆ ತಡೆ ತಂದಿದ್ದರು. ನ. ೨೦ ರಂದು ಸಭೆಯಾಗಿದ್ದು, ದರ ನಿಗದಿ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ನಷ್ಟದಲ್ಲಿ ಇರುವ ರೈತರ ಪರವಾಗಿ ನಿಲ್ಲಬೇಕು. ಸದ್ಯ ರೈತರಿಗೆ ಅನ್ಯಾಯ ಆಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಕಂತೆ ಹಾಲಿನ ದರವೂ ಹೆಚ್ಚಳ ಆಗಬೇಕು. ಆಗ ರೈತನಿಗೆ ತುಸು ನೆರವು ಸಿಕ್ಕಂತೆ ಆಗುತ್ತದೆ. -ಪಿ.ಎಂ. ಪ್ರಸನ್ನ, ಅಧ್ಯಕ್ಷರು, ಮೈಮುಲ್

ನಮಗೆ ಈಗ ೫೦೦ ರೂ. ಹಾಲಿದ ದುಡ್ಡು ಬಂದರೆ ಅದರಲ್ಲಿ ೩೫೦ ರೂ. ಖರ್ಚು ಆಗಿರುತ್ತದೆ. ೧೫೦ ರೂ. ಲಾಭ ಎಂದು ಅಂದುಕೊಂಡರೂ ನಾವು ಹಸುಗಳಿಗೆ ಹಾಕಿರುವ ಬಂಡವಾಳ, ಬಾಡಿಗೆ, ನಮ್ಮ ಕೂಲಿಗಳನ್ನೆಲ್ಲಾ ಲೆಕ್ಕ ಮಾಡಿದರೆ ಏನೂ ಲಾಭವಿಲ್ಲ. ಮತ್ತೊಬ್ಬರ ಬಳಿ ಕೆಲಸಕ್ಕೆ ಹೋಗುವುದಕ್ಕಿಂತ ಇದು ಉತ್ತಮ ಎನ್ನುವ ಕಾರಣಕ್ಕೆ ಹೈನುಗಾರಿಕೆ ಮಾಡುತ್ತಿದ್ದೇವೆ. ನಮ್ಮದು ರೈತ ಪರ ಸರ್ಕಾರ ಎಂದು ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ. ಆದರೆ ನ್ಯಾಯ ಒದಗಿಸುವ ಸಂದರ್ಭ ಬಂದಾಗ ಮೌನವಾಗುತ್ತಾರೆ. ಹಾಲಿನ ದರ ಹೆಚ್ಚಳ ಮಾಡಿದರೆ ಮಾತ್ರ ನಾವು ಉಳಿಯಲು ಸಾಧ್ಯ. – ಕೃಷ್ಣ, ಜಿ.ಬಿ. ಸರಗೂರು, ಎಚ್.ಡಿ.ಕೋಟೆ ತಾಲ್ಲೂಕು

ಹಸು ಸಾಕಾಣಿಕೆಯಿಂದ ಏನೂ ಗೀಟುವುದಿಲ್ಲ. ಸುಮ್ಮನೆ ಕೂರಬೇಕಲ್ಲ ಎನ್ನುವ ಕಾರಣಕ್ಕೆ ಎರಡ್ಮೂರು ಹಸುಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಮನೆ ಖರ್ಚಿಗೆ ಸಾಕಾಗುವಷ್ಟು ಕಾಸು ಬರುತ್ತಿತ್ತು. ಆದರೆ ಈಗ ಎಣ್ಣೆ, ಕಾಳು, ಬೇಕಾದ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಬರುವ ಹಣ ಯಾವುದಕ್ಕೂ ಎಟುಕುವುದಿಲ್ಲ. ಅಲ್ಲದೇ ೫ ರೂ. ಕೊಡುತ್ತಿದ್ದ ಪ್ರೋತ್ಸಾಹ ಧನ ಇನ್ನೂ ಬಂದಿಲ್ಲ. ಇದೆಲ್ಲವನ್ನೂ ಲೆಕ್ಕ ಮಾಡಿದರೆ ಈಗ ಕೊಡುತ್ತಿರುವ ಹಣ ಸಾಲದು. ಸರ್ಕಾರ ಲೀಟರ್ ಹಾಲಿಗೆ ೫ ರೂ. ನಷ್ಟು ಹೆಚ್ಚು ಮಾಡಬೇಕು. – ಕುಮಾರಿ, ರಾಗಿಮುದ್ದನಹಳ್ಳಿ, ಮಂಡ್ಯ ತಾಲ್ಲೂಕು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ