ಈಗ ಬಿಸಿಲು, ಮಳೆ, ಚಳಿ ಎಲ್ಲವೂ ಇದೆ. ಆದರೆ, ಕಾಲಕ್ಕೆ ತಕ್ಕಂತಿಲ್ಲ. ವಾತಾವರಣಕ್ಕೇ ಗೊಂದಲ ಆಗುವಷ್ಟು ಪರಿಸರ ಮಲಿನಗೊಂಡಿದೆ.
ಬಾಪು ಸತ್ಯನಾರಾಯಣ
ನಾನು ಹುಟ್ಟಿದ್ದು ೧೯೩೨ನೇ ಇಸವಿಯಲ್ಲಿ. ೬೦ನೇ ದಶಕದ ತನಕ ವಾತಾವರಣ ಬಹಳ ಚೆನ್ನಾಗಿತ್ತು. ಸುತ್ತಲೂ ಮುಕ್ತ ಜಾಗಗಳಿದ್ದವು, ಉದ್ಯಾನಗಳಿದ್ದವು. ಅಂದು ಕಾಂಕ್ರೀಟ್ ಮನೆಗಳ ಸಂಖ್ಯೆ ಕಡಿಮೆ. ಹಂಚಿನ ಮನೆಗಳಲ್ಲಿನ ಚಳಿ ತುಂಬಾ ಚೆನ್ನಾಗಿತ್ತು. ಆ ದಿನಗಳಲ್ಲಿ ಚಳಿಯನ್ನು ತಡೆದುಕೊಳ್ಳುವ ಶಕ್ತಿಯೂ ಇತ್ತು.
ಹೊದ್ದುಕೊಂಡು ಮಲಗಿದರೆ ಸಮಯದ ಪರಿವೆಯೂ ಇರುತ್ತಿರಲಿಲ್ಲ. ನಾನು ದೆಹಲಿಯಲ್ಲಿದ್ದಾಗ ಚಳಿಗಾಲದಲ್ಲೂ ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆ, ಕಷ್ಟವೆನಿಸುತ್ತಿರಲಿಲ್ಲ. ಮನಸ್ಸಿಗೆ ಬಹಳ ಮುದ ಕೊಡುತ್ತಿದ್ದ ಚಳಿಯಾಗಿತ್ತು.
೧೯೭೦ – ೮೦ರ ದಶಕದ ನಂತರ ಚಳಿಗಾಲದ ಸಂಪೂರ್ಣ ಚಿತ್ರಣವೇ ಬದಲಾಯಿತು. ವಾಹನ- ಕಟ್ಟಡಗಳು ತುಂಬಿಕೊಂಡು ಅಧ್ವಾನವಾಯಿತು. ೧೯೫೦ರಲ್ಲಿ ನಮ್ಮ ದೇಶದಲ್ಲಿ ಕೇವಲ ಮೂರು ಲಕ್ಷಗಳಷ್ಟಿದ್ದ ವಾಹನಗಳ ಸಂಖ್ಯೆ ಈಗ ಬರೋಬ್ಬರಿ ೬೬ ಲಕ್ಷಕ್ಕೇರಿದೆ. ೧೯೧೫ರಲ್ಲಿ ೨೪,೦೦೦ ಕಿಲೋಮೀಟರ್ ಇದ್ದ ರಸ್ತೆ ಈಗ ೩೫೪ ಮಿಲಿಯನ್ ಕಿಲೋಮೀಟರ್ಗಳಷ್ಟಾಗಿದೆ. ಶೇಕಡಾ ೩೩ರಷ್ಟು ಅರಣ್ಯಗಳಿರಬೇಕಾದಲ್ಲಿ ಈಗ ಉಳಿದಿರುವುದು ಕೇವಲ ೨೪ – ೨೫ ಪ್ರತಿಶತಕಾಡುಗಳು. ಎಲ್ಲ ಕಡೆಗಳಲ್ಲೂ ನಗರ ಎಂಬ ಕಾಂಕ್ರೀಟು ಕಾಡಿನೊಳಗೆ ಹಿಡಿ ಮಣ್ಣು ಹುಡುಕುವುದಕ್ಕೂ ಹರಸಾಹಸ ಪಡಬೇಕಾಗಿರುವುದರಿಂದ ಹವಾಮಾನ ವ್ಯತ್ಯಯಕ್ಕೆ ನೇರ ಪರಿಣಾಮವನ್ನುಂಟು ಮಾಡಿದೆ.
ಪಾತಾಳದಲ್ಲೂ ವಾಸ್ತವ್ಯ ಹೂಡುವಷ್ಟು ಮನುಷ್ಯ ಮುಂದುವರಿದಿದ್ದಾನೆ. ಇದೇ ಕಾರಣಕ್ಕೆ ವಾತಾವರಣದಲ್ಲಿ ಏರುಪೇರಾಗಿ ಮಳೆ – ಬಿಸಿಲು- ಚಳಿಗೆ ನಿರ್ದಿಷ್ಟ ಕಾಲಮಾನವೇ ಇಲ್ಲದಂತಾಗಿದೆ.
ಕಾಲಮಾನದ ಏರುಪೇರಿಗೆ ಮುಖ್ಯ ಕಾರಣ ಪರಿಸರ ಮಾಲಿನ್ಯ. ಕಾಡುಗಳು ನಾಶವಾಗಿ ಪ್ರಾಣಿಗಳು, ಉರಗಗಳು ಮನುಷ್ಯರೊಡನೆ ನೇರಾನೇರ ಸಂಘರ್ಷಕ್ಕಿಳಿದಿವೆ. ಕಾಡುಪ್ರಾಣಿಗಳು ನಾಡಿಗೆ ದಾಳಿಯಿಡುವುದು ಪರಿಸರ ಕಲುಷಿತಗೊಂಡಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮಾಲಿನ್ಯದ ತೊಂದರೆಗಳನ್ನು ಕುರಿತು ಮಾತನಾಡುವ ಮೊದಲು ಸಂರಕ್ಷಣೆಯ ಬಗ್ಗೆ ಯೋಚಿಸಬೇಕು. ಸರಕಾರ ಹಸಿ ಕಸ, ಒಣಕಸ, ಎಲೆಕ್ಟ್ರಾನಿಕ್ ವೇಸ್ಟ್ ಇತ್ಯಾದಿಯಾಗಿ ವಿಂಗಡಿಸಿ ವಿಲೇವಾರಿಗೆ ಕ್ರಮ ಕೈಗೊಂಡಿದ್ದರೂ ಸುತ್ತಮುತ್ತ ಕಸ ಚೆಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ.
ಮುಂದೊಂದು ದಿನ ಎಲೆಕ್ಟ್ರಾನಿಕ್ ತ್ಯಾಜ್ಯವೇ ಪ್ಲಾಸ್ಟಿಕ್ನಂತೆ ಬಹುದೊಡ್ಡ ಸಮಸ್ಯೆಯಾಗಿಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಸ್ವಚ್ಛತೆಯ ಬಗ್ಗೆ ನಮಗಿರುವ ಉದಾಸೀಭಾವ ಶುದ್ಧ ಗಾಳಿಯ ಅಭಾವವನ್ನು ಸೃಷ್ಟಿಸುತ್ತಿದೆ. ಪ್ರತಿ ವರ್ಷ ಸರಾಸರಿ ೪೪ ಲಕ್ಷ ಜನರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಗಾಳಿಯಲ್ಲಿ ವಿಷಕಾರಿ ದೂಳಿನ ಕಣಗಳಿಂದ ಉಸಿರಾಡುವುದೇ ಕಷ್ಟವಾಗಿದೆ. ಈಗ ಬಿಸಿಲು, ಮಳೆ, ಚಳಿ ಎಲ್ಲವೂ ಇದೆ. ಆದರೆ, ಕಾಲಕ್ಕೆ ತಕ್ಕಂತಿಲ್ಲ. ವಾತಾವರಣಕ್ಕೇ ಗೊಂದಲ ಆಗುವಷ್ಟು ಪರಿಸರ ಮಲಿನಗೊಂಡಿದೆ.
ಅಂದಿನ ಹೆಂಚಿನ ಮನೆಗಳು, ಮಣ್ಣಿನ ರಸ್ತೆಗಳು, ಸೈಕಲ್ – ಎತ್ತಿನ ಗಾಡಿಗಳು ಕಣ್ಮರೆಯಾಗಿ ಕಾಂಕ್ರೀಟಿನೊಳಗೆ ಕಳೆದು ಹೋಗಿದ್ದೇವೆ. ಬಣ್ಣ ಬಣ್ಣದ ಹೊದೆವ ಕಂಬಳಿಗಳಿವೆ. ಆದರೆ ಇಂದಿನ ಚಳಿ, ಕನಸಿಗೆ ಬಣ್ಣ ತುಂಬುವ ಬದಲಾಗಿ ದೇಹಾರೋಗ್ಯದ ಕುರಿತು ಭಯ ಹುಟ್ಟಿಸುತ್ತಿದೆ.




