ಕಡಿಮೆ ಖರ್ಚಿನಲ್ಲಿ ಮಿಶ್ರ ಬೇಸಾಯ ಪದ್ಧತಿಯ ಮೂಲಕ ಉತ್ತಮ ಲಾಭ ಗಳಿಸುತ್ತಿರುವ ಶ್ರೀರಾಂಪುರ ಶ್ರೀನಿವಾಸ್
ಭೇರ್ಯ ಮಹೇಶ್
ಎರಡು ಎಕರೆ ಹಿಡುವಳಿ ಜಮೀನಿದೆ. ಸಾಕಷ್ಟು ನೀರಿನ ವ್ಯವಸ್ಥೆಯೂ ಇದೆ. ಹೀಗಿದ್ದರೂ ಅವರು ಏಕ ಬೆಳೆ ಪದ್ಧತಿಗೆ ಮಾರು ಹೋಗಿಲ್ಲ. ಅತಿಯಾಗಿ ದುಡಿಯಬೇಕು ಎಂಬ ಆಸೆಗಾಗಿ ಸಿಕ್ಕ ಸಿಕ್ಕ ಬೆಳೆಗಳನ್ನೂ ಬೆಳೆದಿಲ್ಲ. ಇರುವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಂಡು, ಸಕಾಲಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು, ಮಿಶ್ರ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಚುಂಚ ನಕಟ್ಟೆ ಹೋಬಳಿಯ ಶ್ರೀರಾಂಪುರ ಗ್ರಾಮದ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್. ತಮ್ಮ ೭೩ರ ಇಳಿ ವಯಸ್ಸಿನಲ್ಲಿಯೂ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಬೇಸಾಯನ್ನು ಮಾಡುತ್ತಿದ್ದಾರೆ.
ಮಾರುಕಟ್ಟೆ ಆಧಾರಿತ ಬೆಳೆಗಳು: ಎರಡು ಎಕರೆ ಜಮೀನಿನಲ್ಲಿ ಅಡಕೆ, ತೆಂಗು, ಮೆಣಸು, ಏಲಕ್ಕಿ, ಕಾಫಿ, ಚಕ್ಕೋತ, ಬಾಳೆ, ಅಪ್ರಧಾನ ಹಣ್ಣುಗಳಾದ ರಾಮಫಲ, ಸೀತಾಫಲ, ಲಕ್ಷ ಣ ಫಲ, ಹನುಮ ಫಲ, ಬಟರ್ ಫ್ರೂಟ್, ವಾಟರ್ ಆಪಲ್, ಆಸ್ಟ್ರೇಲಿಯಾ ಅಂಜೂರ, ಖರ್ಜುರ, ಸೇಬು, ದಾಳಿಂಬೆ, ವರ್ಷಪೂರ್ತಿ ಬಿಡುವ ಮಾವಿನ ಹಣ್ಣು, ಇಂಗು, ಮೋಸಂಬಿ, ಕಿತ್ತಳೆ, ಡ್ರ್ಯಾಗನ್, ಮೈಸೂರು ವೀಳ್ಯದೆಲೆ, ದ್ರಾಕ್ಷಿ, ಆಲ್ ಸ್ಪೆ ಸಿ, ನಿಂಬೆ, ಹೇರಳೆಕಾಯಿ, ಹನ್ನೆರಡು ತಳಿಯ ಬಾಳೆಹಣ್ಣು ಬೆಳೆದರೆ, ಇನ್ನು ಪಕ್ಷಿಗಳಿಗಾಗಿ ಸೀಬೆ ಬೆಳೆದಿದ್ದು ತೋಟದಲ್ಲಿ ಪಕ್ಷಿಗಳ ಕಲರವ ಇಂಪಾಗಿ ತುಂಬಿದಂತಿದೆ.
ಜಮೀನಿನ ಬದುವಿನಲ್ಲಿ ವಿವಿಧ ಮಾದರಿಯ ಹೂಗಿಡಗಳು, ತಹರೇವಾರಿ ಪಪ್ಪಾಯಿ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಹಲಸಿನ ಮರಗಳು ವರ್ಷಕ್ಕೆ ಎರಡು ಬಾರಿ ಹಲಸಿನ ಕಾಯಿ ಬಿಡುತ್ತವೆ. ತರಕಾರಿ, ಹಣ್ಣುಗಳು ಮಾರಾಟಕ್ಕೆ ಸ್ಥಳೀಯವಾಗಿಯೇ ಮಾರುಕಟ್ಟೆ ಹುಡುಕಿಕೊಂಡಿದ್ದಾರೆ. ದ್ವಿದಳ ಧಾನ್ಯ, ತರಕಾರಿ ಜತೆಗೆ, ಔಷಧಿಯ ಗಿಡ, ಸಂಬಾರ ಪದಾರ್ಥಗಳು ಸಂಗಾತಿ ಬೆಳೆಗಳಾಗಿ ಬೆಳೆದಿದ್ದಾರೆ.
ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧ ಬಳಸದೇ ಜೀವಾಮೃತ ತಯಾರಿಸಿಕೊಂಡು ಬಳಸುತ್ತಾರೆ. ಸಾವಯವ ಮಾದರಿಯಲ್ಲಿ ಇಪ್ಪತ್ತು ತರಹದ ಕಷಾಯದ ಜೊತೆಗೆ ಗೋಮೂತ್ರ ಬೆರೆಸಿ ಯಾವುದೇ ರೋಗ ಹರಡದಂತೆ ಬೆಳೆಗಳಿಗೆ ಸಿಂಪಡಿಸಲಾಗುತ್ತದೆ, ಗೊಬ್ಬರಕ್ಕಾಗಿ ತೋಟದಲ್ಲಿ ಉದುರಿದ ಹಲಸಿನ ಎಲೆಗಳು, ತೆಂಗಿನ ಮರದ ಗರಿಗಳು ಸೇರಿದಂತೆ ಅನೇಕ ರೀತಿಯ ಕಸಕಡ್ಡಿಗಳನ್ನು ಮರದ ಸುತ್ತ ಹಾಕಿ ಅದರ ಮೇಲೆ ಮಣ್ಣ ಮುಚ್ಚಿದ್ದಾರೆ, ಈ ರೀತಿಯಲ್ಲಿ ಮಾಡಿದರೆ ಭೂಮಿಯು ಫಲವತ್ತಾಗುತ್ತದೆ ಜೊತೆಗೆ ಉತ್ತಮ ಗೊಬ್ಬರ ತಯಾರುತ್ತದೆ ಎಂಬುದು ಅವರ ಉತ್ತರ.
ಕಷಾಯಕ್ಕೆ ಬೇವಿನಸೊಪ್ಪು, ಎಕ್ಕದ ಸೊಪ್ಪು, ಖಾಕಿಸೊಪ್ಪು, ಹೊಂಗೆ, ಲೆಕ್ಕ, ಬೇಲಿ ಮೇಲಿನ ಸೊಪ್ಪು, ಹಂಬುಗಳು ಸೇರಿದಂತೆ ಅನೇಕ ತರಹದ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಂದಾಜು ೫೦ ಕೆ.ಜಿ. ಬ್ಯಾಗ್ ೪೦ರಿಂದ ೫೦ ಮೂಟೆ ಕಾಫಿ ಬೀಜ ಸಿಗುತ್ತದೆ. ನಾಲ್ಕು ಕ್ವಿಂಟಾಲ್ ಮೆಣಸು, ನೂರು ಕ್ವಿಂಟಾಲ್ ಅಡಕೆ, ತೆಂಗಿನ ಫಸಲಿನಿಂದ ಎರಡು ಲಕ್ಷ ರೂ. ಆದಾಯ ಸೇರಿದಂತೆ ವಾರ್ಷಿಕ ೧೨ ಲಕ್ಷ ರೂ.ಗಳಷ್ಟು ಆದಾಯ ಬಂದರೆ ಅದರಲ್ಲಿ ನಾಲ್ಕು ಲಕ್ಷ ರೂ. ಕೂಲಿ ಕಾರ್ಮಿಕರಿಗಾಗಿ ಬಟವಾಡೆ ಮಾಡುತ್ತಾರೆ.
ಆ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ ನಿವೃತ್ತ ಶಿಕ್ಷಕ ಶ್ರೀರಾಂಪುರ ಶ್ರೀನಿವಾಸ್.
” ಇದುವರೆಗೂ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧವನ್ನು ಬಳಸಿಲ್ಲ, ಜೀವಾಮೃತ ತಯಾರಿಸಿ, ಸಾವಯವ ಪದ್ಧತಿಯನ್ನು ಅನುಸರಿಸಿ ಸಮಗ್ರ ಕೃಷಿಯನ್ನು ಮಾಡುತ್ತಿದ್ದೇನೆ. ನಮ್ಮ ತೋಟದಲ್ಲಿ ಏನೆಲ್ಲ ಬೆಳೆಯಲಾಗಿದೆ ಎಂಬುದನ್ನು ತಿಳಿಯಲು ನಿತ್ಯ ರೈತರು, ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬಂದು ವೀಕ್ಷಿಸಿದ್ದಾರೆ. ದುಡಿಯುವ ಕೈಗೆ ಕೆಲಸ ಬೇಕಿದೆ. ಇಂದಿನ ಯುವ ಪೀಳಿಗೆ ಉದ್ಯೋಗ ಅರಸಿ ನಗರಕ್ಕೆ ಮುಖ ಮಾಡುವ ಬದಲು ಇರುವ ತಮ್ಮ ಜಮೀನಿನಲ್ಲಿಯೇ ಸಮಗ್ರ ಕೃಷಿ ಬೇಸಾಯ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು.”
-ಶ್ರೀನಿವಾಸ್,
ಪ್ರಗತಿಪರ ರೈತರು ಹಾಗೂ ನಿವೃತ್ತ ಶಿಕ್ಷಕರು





