ನಟಿ ಪೂಜಾ ಗಾಂಧಿ ಕಳೆದ ಕೆಲ ದಿನಗಳ ಹಿಂದೆ ರಮ್ಯಾ ಅವರನ್ನು ಇಷ್ಟ ಪಡಲು ಕಾರಣ ಏನೆಂಬುದನ್ನು ಹೇಳಿಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಮತ್ತೆ ಮೋಹಕ ತಾರೆ ಬಗ್ಗೆ ಮಾತನಾಡಿರುವ ಮಳೆ ಹುಡುಗಿ ಪೂಜಾ ಗಾಂಧಿ, ನನಗೆ ರಮ್ಯಾ ಮೇಲೆ ತುಂಬಾ ಗೌರವ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ರಮ್ಯಾ ಅವರು ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಮ್ಯಾ ಅವರು ಬಹಳಾ ನಿಷ್ಠೇ ಹಾಗೂ ಶ್ರಮದಿಂದ ಸಾಧನೆ ಮಾಡಿದ್ದಾರೆ. ನಾನು ರಾಯಚೂರಿನಲ್ಲಿ ಚುನಾವಣೆಗೆ ನಿಂತಾಗ ಹೀನಾಯವಾಗಿ ಸೋತಿದ್ದೆ. ಆಗ ರಮ್ಯಾ ಅವರು ನನ್ನ ಪರವಾಗಿ ನಿಂತಿದ್ದರು. ನನಗಾಗಿ ಟ್ವೀಟ್ ಮಾಡಿದ್ದರು. ನಾನು ಮತ್ತು ರಮ್ಯಾ ಭೇಟಿಯಾದಾಗಲೆಲ್ಲಾ ತುಂಬಾ ಪ್ರೀತಿ ಹಾಗೂ ಗೌರವದಿಂದ ಮಾತನಾಡಿಸುತ್ತಾರೆ ಎಂದಿದ್ದಾರೆ.
ನಟಿ ಪೂಜಾ ಗಾಂಧಿಯವರು ನವೆಂಬರ್ 29 ರಂದು ಕವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ಉದ್ಯಮಿ ವಿಜಯ್ ಘೋರ್ಪಡೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉತ್ತರ ಪ್ರದೇಶ ಮೂಲದವರಾದ ಪೂಜಾ ಗಾಂಧಿಯವರಿಗೆ ಸ್ಯಾಂಡಲ್ವುಡ್ ಗೆ ಕಾಲಿಟ್ಟಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ ಆಗ ವಿಜಯ್ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದರು. ಇದೀಗ ಮುಂಗಾರು ಮಳೆ ಬೆಡಗಿ ಕನ್ನಡ ಕಲಿಸಿದ ಗುರುವನ್ನೇ ವರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿರುವ ಪೂಜಾ ಗಾಂಧಿ ತಮ್ಮ ಮಾತೃ ಭಾಷೆ ಹಿಂದಿ ಆದರೂ ಕೂಡ ಅವರು ಕನ್ನಡ ಭಾಷೆಯ ಮೇಲೆ ಅಪಾರವಾದ ಒಲವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಇರುವ ಪರ ಭಾಷಿಕರೂ ಕೂಡ ಕನ್ನಡವನ್ನು ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ.