Mysore
25
overcast clouds
Light
Dark

Chennai Rains: ತಾಯಿ ನೋಡಿಕೊಳ್ಳಲು ಬಂದು ಚೆನ್ನೈ ಮಳೆಗೆ ಸಿಲುಕಿದ ಆಮಿರ್‌ ಖಾನ್‌

ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೆನ್ನೈ ನಗರ ಅಕ್ಷರಶಃ ತತ್ತರಿಸಿದೆ. ನಗರದ ಹಲವಾರು ಪ್ರದೇಶಗಳು ನೀರಿನಿಂದ ಜಲಾವೃತವಾಗಿದ್ದು, ನೀರು ಮನೆಗಳ ನಡುವೆ ನದಿಯ ಹಾಗೆ ರಭಸವಾಗಿ ಹರಿದು ಸಾಗುತ್ತಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಕಾಣಬಹುದಾಗಿದೆ.

ಮಳೆಯ ಹೊಡೆತಕ್ಕೆ ಮರಗಳು ಧರೆಗುಳಿದಿದ್ದು, ಎರಡ್ಮೂರು ದಿನಗಳಿಂದ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಇನ್ನು ನಗರದಲ್ಲಿ ಮೊಬೈಲ್‌ ಸಿಗ್ನಲ್‌ ಹಾಗೂ ವೈಫೈ ಸೇವೆಗಳೂ ಸಹ ಕಡಿತಗೊಂಡಿದ್ದು, ರಸ್ತೆ ಬದಿಯಲ್ಲಿ ಮಲಗುತ್ತಿದ್ದವರಿಂದ ಹಿಡಿದು ಬಂಗಲೆಯಲ್ಲಿ ವಾಸವಿದ್ದ ಶ್ರೀಮಂತರೂ ಸಂತ್ರಸ್ಥರಾಗಿ ಒಂದೇ ಸಾಲಿನಲ್ಲಿ ನಿಂತಿದ್ದಾರೆ.

ಇನ್ನು ಪ್ರಕೃತಿ ಮುಂದೆ ಎಲ್ಲರೂ ಸಮ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದ್ದು, ಮಿಚಾಂಗ್‌ ಚಂಡಮಾರುತದ ಎಫೆಕ್ಟ್‌ ಸಿನಿಮಾ ಸೆಲೆಬ್ರಿಟಿಗಳ ಮೇಲೂ ಸಹ ಬಿದ್ದಿದೆ. ಬಾಲಿವುಡ್‌ ನಟ ಆಮಿರ್‌ ಖಾನ್‌ ತನ್ನ ತಾಯಿಯ ಚಿಕಿತ್ಸೆಗಾಗಿ ಚೆನ್ನ ತಲುಪಿ ಹೊಟೇಲ್‌ನಲ್ಲಿ ತಂಗಿದ್ದರು. ಆದರೆ ಹೊಟೇಲ್‌ಗೂ ಸಹ ನೀರು ನುಗ್ಗಿದ ಪರಿಣಾಮ ಆಮಿರ್‌ ಖಾನ್‌ ಅವರನ್ನು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ರಕ್ಷಿಸಿ ಬೋಟ್‌ನಲ್ಲಿ ಕರೆದೊಯ್ದಿದ್ದಾರೆ.

ಇನ್ನು ಆಮಿರ್‌ ಖಾನ್‌ ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ವಿಷಯ ತಮಿಳು ನಟ ವಿಷ್ಣು ವಿಶಾಲ್‌ ಹಂಚಿಕೊಂಡ ಪೋಸ್ಟ್‌ನಿಂದ ಬಹಿರಂಗವಾಗಿದೆ. ರಾಟ್ಸಸನ್‌ ಚಿತ್ರದ ಖ್ಯಾತಿಯ ನಟ ವಿಷ್ಣು ವಿಶಾಲ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ತಮ್ಮನ್ನು ರಕ್ಷಿಸಿದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್‌ ಮಾಡಿದ್ದು, ಇದರಲ್ಲ ವಿಷ್ಣು ವಿಶಾಲ್‌ ಜತೆ ಆಮಿರ್ ಖಾನ್‌ ಸಹ ಇರುವುದನ್ನು ಕಾಣಬಹುದಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ