ಕರ್ನಾಟಕ ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ದೂರವಿದ್ದು, ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದರು ನಟ ನಿಖಿಲ್ ಕುಮಾರಸ್ವಾಮಿ. ಎರಡು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದರೂ, ಎರಡಕ್ಕೂ ಶೂಟಿಂಗ್ ಗಾಗಿ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಹೊಣೆ ಹೊತ್ತಿದ್ದರಿಂದ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ. ಚುನಾವಣೆ ಮುಗಿದ ಕಾರಣದಿಂದಾಗಿ ಮತ್ತೆ ಚಿತ್ರರಂಗದತ್ತ ನಿಖಿಲ್ ಮುಖ ಮಾಡುತ್ತಿದ್ದಾರೆ.
ಸೀತಾ ರಾಮ್ ಕಲ್ಯಾಣ್ ಸಿನಿಮಾದ ನಂತರ ಧನುಷ್ ಮತ್ತು ಯದುವೀರ ಎಂಬೆರಡು ಚಿತ್ರಗಳನ್ನು ನಿಖಿಲ್ ಒಪ್ಪಿಕೊಂಡಿದ್ದರೂ, ಎರಡೂ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಹಾಗಾಗಿ ನಿರಾಳರಾಗಿ ಚುನಾವಣೆಗೆ ಕಳುಹಿಸಿ ಕೊಟ್ಟಿದ್ದರು ಆಯಾ ಚಿತ್ರಗಳ ನಿರ್ಮಾಪಕರು. ಆ ಚಿತ್ರಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಈ ನಡುವೆ ಮತ್ತೊಂದು ಹೆಸರಾಂತ ಸಂಸ್ಥೆ ನಿಖಿಲ್ ಚಿತ್ರ ಮಾಡಲು ಮುಂದಾಗಿದೆ.
ದಕ್ಷಿಣ ಭಾರತದ ಶ್ರೀಮಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಇದೀಗ ನಿಖಿಲ್ ಅವರ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದೆ ಬಂದಿದೆ. ಈಗಾಗಲೇ ನಿಖಿಲ್ ಜೊತೆ ಮಾತುಕತೆಯನ್ನೂ ಆಡಿದೆ. ನಿಖಿಲ್ ಕೂಡ ಆ ಕಂಪೆನಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ.
ನಿಖಿಲ್ ಕುಮಾರಸ್ವಾಮಿ ದೊಡ್ಡದೊಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈವರೆಗೂ ಬಂದ ಚಿತ್ರಗಳು ನಿಖಿಲ್ ಅವರಿಗೆ ಅಷ್ಟೇನೂ ಹೇಳಿಕೊಳ್ಳುವಂತಹ ಆದಾಯ ಮತ್ತು ಹೆಸರು ತಂದುಕೊಟ್ಟಿಲ್ಲ. ಹಾಗಾಗಿ ದೊಡ್ಡ ಬ್ರೇಕ್ ಗಾಗಿಯೇ ಅವರು ಕಾಯುತ್ತಿದ್ದಾರೆ. ಒಪ್ಪಿಕೊಂಡ ಚಿತ್ರಗಳು ಅವರ ಕೈ ಹಿಡಿಯಲಿ ಎನ್ನುವುದು ಅಭಿಮಾನಿಗಳ ಆಸೆ.





