ಅಂತರ್ಮತೀಯ ಪ್ರೆಮಕಥೆಯನ್ನು ಹೇಳುವ ಚಿತ್ರವನ್ನು ಕೆ.ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಅದರ ಹೆಸರು ‘13’. ಚಿತ್ರ ಮತ್ತು ಅದರ ಚಿತ್ರೀಕರಣದ ಕುರಿತಂತೆ ಅವರು ಹೇಳುವುದು ಹೀಗೆ: ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟ ಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು. ಮುಹೂರ್ತದ ಸಂದರ್ಭದಲ್ಲಿ ಮೂರು ತಿಂಗಳಲ್ಲಿ ಮೊದಲ ಪ್ರತಿ ಹೊರತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ ಆರು ತಿಂಗಳಾಯಿತು.

ಒಬ್ಬರಿಗೆ ಹಾರ್ಟ್ಅಟ್ಯಾಕ್ ಆಯ್ತೂ, ನನ್ನ ಕಾಲಿಗೂ ಪೆಟ್ಟಾಗಿ ಇನ್ನೂ ಸರಿಯಾಗಿಲ್ಲ, ಕೊಟ್ಟಿಗೆ ಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಲ್ವರು ನಿರ್ಮಾಪಕರು ನಾಲ್ಕು ಕಂಬಗಳಂತೆ ನಿಂತಿದ್ದಾರೆ. ರಾಗಣ್ಣ ಅವರನ್ನು ಈ ವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ನೋಡಬಹುದು. ರಾಘವೇಂದ್ರ ರಾಜ್ಕುಮಾರ್, ಶ್ರುತಿ ಜೋಡಿಯ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ಪ್ರಮುಖ ಪಾತ್ರಧಾರಿ. ಯುವಿ ಪ್ರೊಡಕ್ಷನ್ ಲಾಂಛನದಲ್ಲಿ ಈ ಚಿತ್ರವನ್ನು ಸಂಪತ್ಕುಮಾರ್, ಮಂಜುನಾಥ್, ಮಂಜುನಾಥಗೌಡ ಸೇರಿ ನಿರ್ಮಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡದೆ ಒಂದು ನೈಜ ಘಟನೆ ಈ ಚಿತ್ರಕ್ಕೆ ಸ್ಛೂರ್ತಿ ಎನ್ನಲಾಗಿದೆ. ಮಂಜುನಾಥ್ ನಾಯ್ಡು ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.





