Mysore
21
overcast clouds

Social Media

ಗುರುವಾರ, 22 ಮೇ 2025
Light
Dark

ನಟ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ, ಸಿಸಿಬಿಯಿಂದ ಆಪ್ತನ ಬಂಧನ!

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಸುದೀಪ್ ಅವರಿಗೆ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರಿಂದ ಡೈರೆಕ್ಟರ್ ರಮೇಶ್ ಕಿಟ್ಟಿ ಎಂಬಾತನ ಬಂಧನವಾಗಿದ್ದು, ಈತ ಸುದೀಪ್ ಚಾರಿಟೇಬಲ್ ಟ್ರಸ್ಟ್ ರುವಾರಿಯಾಗಿದ್ದ ಎಂದು ತಿಳಿದುಬಂದಿದೆ.

ಸುದೀಪ್  ಅವರ ಆಪ್ತನಾಗಿದ್ದ ರಮೇಶ್ ಈ ಹಿಂದೆ ಹಲವು ಸಿನಿಮಾಗಳನ್ನ ಡೈರೆಕ್ಟ್ ಮಾಡಿದ್ದ. ಸುದೀಪ್ ಮತ್ತು ರಮೇಶ್ ನಡುವೆ ಚಾರಿಟಿ ಹಣದ ವಿಚಾರವಾಗಿ ವೈ ಮನಸ್ಸು ಉಂಟಾಗಿತ್ತು. ಚಾರಿಟಿಯಲ್ಲಿ ಸುದೀಪ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಹಣ ಇನ್ವೆಸ್ಟ್ ಮಾಡಿದ್ದೆ. ಆದ್ರೆ ಸುದೀಪ್ ಹಣ ಕೊಡದೆ ಮೋಸ ಮಾಡಿದ್ರು. ಈ ಕೋಪಕ್ಕೆ ಈ ರೀತಿಯ ಬೆದರಿಕೆ ಪತ್ರ ಬರೆದಿದ್ದೆ ಎಂದು ಸಿಸಿಬಿ ವಿಚಾರಣೆಯಲ್ಲಿ ರಮೇಶ್ ಬಾಯ್ಬಿಟ್ಟಿದ್ದಾನಂತೆ.

ಈ ಪ್ರಕರಣ ಹಿಂದೆ ಇನ್ನೂ ಕೆಲ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜೆ.ಪಿ.ನಗರದಲ್ಲಿ ಸುದೀಪ್‌ ಅವರ ಮನೆಗೆ ಕಳೆದ ಮಾ.29 ರಂದು ಅನಾಮಧೇಯ ವ್ಯಕ್ತಿಯಿಂದ ಅಂಚೆ ಮೂಲಕ ಈ ಬೆದರಿಕೆ ಪತ್ರಗಳು ಬಂದಿದ್ದು, ಸುದೀಪ್‌ ಅವರ ಮ್ಯಾನೇಜರ್‌ ಹಾಗೂ ನಿರ್ಮಾಪಕ ಮಂಜುನಾಥ್‌ ಅಲಿಯಾಸ್‌ ಜಾಕ್‌ ಮಂಜು ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು, ಈ ಸಂಬಂಧ ಸಿಸಿಬಿ ತನಿಖೆಗೆ ಆದೇಶಿಸಿದ್ದರು.

ಜೆ.ಪಿ.ನಗರದ 6ನೇ ಹಂತದ ಕೆ.ಆರ್‌. ಲೇಔಟ್‌ 17ನೇ ಕ್ರಾಸ್‌ನಲ್ಲಿ ತಮ್ಮ ಪೋಷಕರ ಜತೆ ಸುದೀಪ್‌ ನೆಲೆಸಿದ್ದಾರೆ. ಮಾ.29ಕ್ಕೆ ಸುದೀಪ್‌ ಅವರ ವಿಳಾಸಕ್ಕೆ ಅಂಚೆ ಮೂಲಕ ಎರಡು ಪತ್ರಗಳು ಬಂದಿದ್ದವು. ಇವುಗಳನ್ನು ಸ್ವೀಕರಿಸಿದ ಸುದೀಪ್‌ ಕುಟುಂಬದವರು, ಅವುಗಳನ್ನು ತೆರೆದು ಓದಿದಾಗ ಅವಾಚ್ಯ ಶಬ್ದಗಳ ನಿಂದನೆ ಮತ್ತು ಬೆದರಿಕೆ ಇದ್ದದ್ದು ನೋಡಿ ಆತಂಕಗೊಂಡಿದ್ದರು.  ಸುದೀಪ್‌ ಸೂಚನೆ ಮೇರೆಗೆ ಪುಟ್ಟೇನಹಳ್ಳಿ ಠಾಣೆಗೆ ಅವರ ಮ್ಯಾನೇಜರ್‌ ದೂರು ನೀಡಿದ್ದರು.

ಈ ಬಗ್ಗೆ ಮಾಧ್ಯಮಕ್ಕೆ ಉತ್ತರಿಸಿದ್ದ ನಟ ಸುದೀಪ್, ನನಗೆ ಬೆದರಿಕೆ ಪತ್ರ ಬಂದಿರುವುದು ನಿಜ. ಈ ಪತ್ರ ಯಾರೂ ಬರೆದಿದ್ದಾರೆ ಎಂಬುದು ಸಹ ಗೊತ್ತಿದೆ. ಪತ್ರ ಬರೆದವವನಿಗೆ ನನ್ನ ಮನೆ ವಿಳಾಸ ಚೆನ್ನಾಗಿ ತಿಳಿದಿದೆ. ಹೀಗಿದ್ದೂ ಯಾಕೆ ಪೋಸ್ಟ್‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಚಿತ್ರರಂಗದಲ್ಲಿರುವ ಒಬ್ಬಾತ ಅದನ್ನು ಕಳುಹಿಸಿದ್ದಾನೆ. ಆತನಿಗೆ ತಕ್ಕ ಉತ್ತರ ಕೊಡುತ್ತೇನೆ’ ಎಂದಿದ್ದರು.  ಸದ್ಯ ಸುದೀಪ್ ಅವರಿಗೆ ಬೆದರಿಕೆ ಹಾಕಿದ ಹಿನ್ನೆಲೆ ಓರ್ವನನ್ನು ಬಂಧಿಸಲಾಗಿದ್ದು, ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ