Mysore
24
scattered clouds

Social Media

ಸೋಮವಾರ, 15 ಜೂನ್ 2026
Light
Dark

ನಟ ಸಾಹಸ ಸಿಂಹ ವಿಷ್ಣುವರ್ಧನ್‌ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿ

ಇದೇ ತಿಂಗಳ 29ರಂದು ಸಿಎಂ ಬೊಮ್ಮಾಯಿ ಅವರಿಂದ ಸ್ಮಾರಕ ಲೋಕಾರ್ಪಣೆ

ಬೆಂಗಳೂರು-ಕನ್ನಡದ ಮೇರು ನಟ ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು,ಇದೇ ತಿಂಗಳ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಲೋಕಾರ್ಪಣೆ ಮಾಡಲಿದ್ದಾರೆ.
ಮೈಸೂರಿನ ಎಚ್ಡಿ‌ ಕೋಟೆಯ ಅಲ್ಲಾಳು ಗ್ರಾಮದಲ್ಲಿ‌ ಐದು ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.
ಮೈಸೂರಿನ ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಅಲ್ಲಾಳು ಗ್ರಾಮದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆಪ್ಟೆಂಬರ್‌ನಲ್ಲಿ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಚಾಮುಂಡಿಪುರಂನ ವಾಸಿಯಾಗಿದ್ದ ವಿಷ್ಣುವರ್ಧನ್‌ ಅವರು ತಮ್ಮ ಶಾಲಾ ಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ್ದರು. ಮೈಸೂರಿನ ಜತೆ ಉತ್ತಮ ಒಡನಾಟ ಹೊಂದಿದ್ದ ಅವರು ತಮ್ಮ ಹೆಚ್ಚಿನ ಚಲನಚಿತ್ರಗಳ ಚಿತ್ರೀಕರಣವನ್ನು ಮೈಸೂರಿನಲ್ಲೇ ನಡೆಸಲು ಒತ್ತು ನೀಡಿದ್ದರು.
ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ.
ವಿಷ್ಣು ಅಗಲಿದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆ‌.15 ರಂದು ಸ್ಮಾರಕಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಮಾರಕಕ್ಕೆ ಭೂಮಿ‌ ಪೂಜೆ ನೆರವೇರಿಸಿದ್ದರು. ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಆಗಲೇ 11 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಸುಮಾರು 13 ವರ್ಷಗಳ ಬಳಿಕ ಸ್ಮಾರಕ ಉದ್ಘಾಟನೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಹರ್ಷ ತಂದಿದೆ. 2009ರ ಡಿ.30ರಂದು ಮೈಸೂರಿನಲ್ಲಿ ದಿಢೀರ್ ಆಗಿ ಮೃತಪಟ್ಟಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದರೂ ನಾನಾ ಕಾರಣಗಳಿಂದಾಗಿ ಅಲ್ಲಿ ಸ್ಮಾರಕ ನಿರ್ಮಿಸುವ ಕೆಲಸ ಕೈಗೂಡಲಿಲ್ಲ.
ದೆಹಲಿಯ ರಾಜಪಥದಲ್ಲಿ ಇತ್ತೀಚೆಗೆ ಅನಾವರಣಗೊಂಡ ನೇತಾಜಿ ಪ್ರತಿಮೆಯ ರೂವಾರಿ, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಆರು ಅಡಿ ಎತ್ತರದ ವಿಷ್ಣು ದಾದಾ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಬೆಂಗಳೂರಿನ ಎಂ.9 ಕಂಪೆನಿಯ ನಿಶ್ಚಲ್ ಸ್ಮಾರಕದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಕೃಷ್ಣ ಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಪ್ರತಿಮೆ ಸುತ್ತಲೂ ವೃತ್ತಾಕಾರದ ಫೋಟೋ ಗ್ಯಾಲರಿ, ಗ್ಯಾಲರಿಯ ಇಬ್ಬದಿಯಲ್ಲಿಯೂ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಡಿಜಿಟಲ್ ಪೋಸ್ಟರ್ ಪ್ರದರ್ಶನ ಇರಲಿದೆ.
ಸ್ಮಾರಕ ಸ್ಥಳದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಮಾದರಿಯಲ್ಲಿ ಹವಾನಿಯಂತ್ರಿತ ಥಿಯೇಟರ್, ಪುರುಷ- ಮತ್ತು ಮಹಿಳಾ ಕಲಾವಿದರ ಡ್ರೆಸ್ಸಿಂಗ್ ಕೊಠಡಿ, ಸುಸಜ್ಜಿತ ಶೌಚಾಲಯ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರಕದ ಮುಂಭಾಗ ಸುಂದರವಾದ ಕಾರಂಜಿ ನಿರ್ಮಾಣವಾಗಿದೆ. ಸ್ಮಾರಕದ ಹೊರ ಆವರಣದಲ್ಲಿ ಸಸ್ಯೋದ್ಯಾನ ನಿರ್ಮಿಸಿ ವಿವಿಧ ಪ್ರಭೇದದ ಹೂವಿನ ಗಿಡಗಳನ್ನು ವೃತ್ತಾಕಾರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರಿನ ಮತ್ತೊಂದು ಪ್ರವಾಸಿತಾಣವಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ.
ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎಂದು ಅಭಿಮಾನಿಗಳ ಬೇಡಿಕೆಗಳಿದ್ದವು, ಅವುಗಳ ನಡುವೆಯೇ ಮೈಸೂರಿನಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!