ನಾಡ ಹಬ್ಬ ದಸರಾ ಕಾರ್ಯಕ್ರಮಗಳಲ್ಲಿ ಯುವ ದಸರಾ ಕಾರ್ಯಕ್ರಮ ಯುವ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರತಿ ವರ್ಷ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಸಲಾಗುತ್ತಿತ್ತು. ಆದರೆ ಕಳೆದ ವರ್ಷ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ಕರೆಸಿದಕ್ಕೆ ಹೆಚ್ಚು ಜನ ಸೇರಲಿ ಎಂದು ಉತ್ತನಹಳ್ಳಿ ಸಮೀಪ ಏರ್ಪಡಿಸಲಾಗಿತ್ತು.
ಈ ಬಾರಿ ಮೊದಲಿನಂತೆಯೇ ಮಹಾರಾಜ ಕಾಲೇಜು ಮೈದಾನದಲ್ಲೇ ಯುವ ದಸರಾ ಕಾರ್ಯಕ್ರಮವನ್ನು ಏರ್ಪಡಿಸಿದರೆ ಕಾಲೇಜು ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಉತ್ತನಹಳ್ಳಿ ಬಳಿ ಯುವ ದಸರಾ ಏರ್ಪಡಿಸಿದರೆ ಕಾಲೇಜು ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಹಿರಿಯ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತದೆ. ಏಕೆಂದರೆ ಎಲ್ಲರ ಬಳಿಯೂ ವಾಹನ ಸೌಕರ್ಯ ಇರುವುದಿಲ್ಲ. ಆಟೋ ಪ್ರಯಾಣ ದರ ತುಂಬಾ ದುಬಾರಿ.
ಕಾರ್ಯಕ್ರಮವು ನಗರದ ಹೊರ ಭಾಗದಲ್ಲಿ ನಡೆಯುವುದರಿಂದ ಕುಟುಂಬದವರೆಲ್ಲ ಒಟ್ಟಾಗಿ ಭಾಗವಹಿಸಿ ಕಾರ್ಯಕ್ರಮ ನೋಡಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಬಗ್ಗೆ ಗಮನ ಹರಿಸಿ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿಯೇ ಆಯೋಜಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಅಹಲ್ಯ ಸಿ. ನಾ. ಚಂದ್ರ, ಜನತಾ ನಗರ, ಮೈಸೂರು





