ಇಂದು ವರದಿ ನೀಡಲು ಕ್ಷೆತ್ರ ಶಿಕ್ಷಣಾಧಿಕಾರಿಗೆ ಸೂಚನೆ
ನಂಜನಗೂಡು: ತಾಲ್ಲೂಕಿನ ಶಾಲೆಯೊಂದರಲ್ಲಿ ಹುಳು ಹಿಡಿದ ಅಕ್ಕಿ, ಗೋಧಿಗಳನ್ನು ಬಿಸಿ ಯೂಟಕ್ಕೆ ಉಪಯೋಗಿಸಲಾಗುತ್ತಿರುವ ಕುರಿತು ಭಾನುವಾರದ ‘ಆಂದೋಲನ’ದಿನಪತ್ರಿಕೆಯ ಮುಖಪುಟದಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಡಿಸಿಪಿಐ ಜವರೇಗೌಡ ಅವರು ಭಾನುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾರ್ಚ್ನಲ್ಲಿ ಸರಬರಾಜಾದ ಅಕ್ಕಿ, ಗೋಧಿ ಹುಳು ಹಿಡಿದಿದ್ದರೆ ಅದನ್ನೇಕೆ ಬದ ಲಾಯಿಸಿಲ್ಲ ಎಂದು ಪ್ರಶ್ನಿಸಿದ ಈ ಅಧಿಕಾರಿಗಳು, ತಾಲ್ಲೂಕಿನಲ್ಲಿ ಎಲ್ಲೆಲ್ಲಿ ದಿನಸಿ ಹುಳು ಹಿಡಿದಿವೆಯೋ ಅವುಗಳನ್ನು ವಾಪಸ್ ಮಾಡಿ ಆ ಶಾಲೆಗಳಿಗೆ ಗೋಡೌನ್ನಿಂದ ಹೊಸದಾಗಿ ಬಿಸಿಯೂಟದ ಸಾಮಗ್ರಿ ನೀಡಬೇಕು. ಹೊಮ್ಮ ಶಾಲೆಯಲ್ಲಿ ಹುಳು ಹಿಡಿದ ಬಿಸಿಯೂಟದ ಕುರಿತು ಸಮಗ್ರವಾಗಿ ಸೋಮವಾರವೇ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
ಹೊಮ್ಮ ಶಾಲೆಯಲ್ಲಿ ಹೊಸದಾಗಿ ಸರಬರಾಜಾದ ಗೋಧಿ, ಅಕ್ಕಿಯನ್ನು ಬಿಸಿಯೂಟಕ್ಕೆ ಉಪಯೋಗಿಸದೆ, ಹಲವು ತಿಂಗಳುಗಳ ಹಿಂದೆ ಸರಬರಾಜಾದ ಧಾನ್ಯಗಳನ್ನು ಹುಳು ಹಿಡಿದ ಮೇಲೆ ಬಳಸಿದ್ದು ತಪ್ಪು. ಅದಕ್ಕೆ ಅಲ್ಲಿನ ಮುಖ್ಯಶಿಕ್ಷಕರೇ ಹೊಣೆ ಎಂದು ತಾಲ್ಲೂಕಿನ ಅಕ್ಷರ ದಾಸೋಹದ ಅಧಿಕಾರಿ ಸೋಮಶೇಖರ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.





