Mysore
24
few clouds

Social Media

ಶನಿವಾರ, 14 ಮಾರ್ಚ್ 2026
Light
Dark

ಕಾವೇರಿ ನದಿ ದಂಡೆಯಲ್ಲಿ ಹೆಚ್ಚುತ್ತಿರುವ ವಾಮಾಚಾರ  

ಭೇರ್ಯ ಮಹೇಶ್

ಮಡಕೆ, ಕುಡಿಕೆ, ನಿಂಬೆಹಣ್ಣು, ಕುಂಕುಮ, ರಾಶಿ ಹೂಗಳನ್ನು ಬಿಸಾಡುತ್ತಿರುವುದರಿಂದ ನದಿ ಕಲುಷಿತ ಆರೋಪ 

ಕೆ.ಆರ್.ನಗರ: ನದಿಗಳ ಸಂರಕ್ಷಣೆಗಾಗಿ ಹಲವು ರೀತಿಯಲ್ಲಿ ಅಭಿಯಾನಗಳು ನಡೆಯುತ್ತಿವೆ. ನದಿಗಳ ಸ್ವಚ್ಛತೆಗಾಗಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯಲ್ಲಿ ಹರಿಯುವ ಕಾವೇರಿ ನದಿ ಆವರಣದಲ್ಲಿ ಮಾಟ, ಮಂತ್ರ, ವಾಮಾಚಾರ ವಿಜೃಂಭಿಸುತ್ತಿದ್ದರೂ ಪುರಸಭೆ ಮತ್ತು ತಾಲ್ಲೂಕು ಆಡಳಿತ ಇತ್ತ ಗಮನಿಸದೆ ಇರುವುದು ಅಚ್ಚರಿಯ ಸಂಗತಿಯಾಗಿದೆ.

ಸಾಲಿಗ್ರಾಮ ಮತ್ತು ಕೆ.ಆರ್.ನಗರ ಅವಳಿ ತಾಲ್ಲೂಕುಗಳಲ್ಲಿ ಹಾದು ಹೋಗಿರುವ ಕಾವೇರಿ ನದಿ ಮೇಲೆ ಹೆಚ್ಚು ಜನ ಅವಲಂಬಿತ ರಾಗಿದ್ದಾರೆ. ಕೃಷಿಗೂ ನೀರು ಬಳಕೆಯಾಗುತ್ತಿದೆ. ಆದರೆ, ನದಿ ಈಗ ವಿವಿಧ ರೀತಿಯಲ್ಲಿ ಕಲುಷಿತಗೊಳ್ಳುತ್ತಿರುವುದು ಪರಿಸರಪ್ರಿಯರಲ್ಲಿ ಬೇಸರ ಮೂಡಿಸಿದೆ.

ಹಳೇ ಎಡತೊರೆಯಲ್ಲಿ ಹರಿಯುವ ಕಾವೇರಿ ನದಿ ದಂಡೆಯಲ್ಲಿ ನದಿಯ ಉದ್ದಗಲಕ್ಕೂ ವಾಮಾಚಾರಕ್ಕೆ ಬಳಸುವ ಮಡಕೆ, ಕುಡಿಕೆ, ನಿಂಬೆಹಣ್ಣು, ಬಣ್ಣ, ಬಣ್ಣದ ಕುಂಕುಮ, ರಾಶಿ, ರಾಶಿ ಹೂ ಇತ್ಯಾದಿ ಪರಿಕರಗಳು ರಾರಾಜಿಸುತ್ತಿವೆ. ಆಧುನಿಕತೆ ಎಷ್ಟೇ ಬೆಳೆದರೂ ವಾಮಾಚಾರದಂತಹ ಕೃತ್ಯಗಳು ಇಂದಿಗೂ ನಡೆಯುತ್ತಿರುವುದು ವಿಪರ್ಯಾಸ. ಹಳೇ ಎಡತೊರೆ ಕಾವೇರಿ ನದಿಯ ದಂಡೆಯಲ್ಲಿ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ಚಾಮಿ ದೇವಾಲಯ ಇದೆ. ನದಿಗೆ ಹೊಂದಿಕೊಂಡಂತೆ ಇರುವ ಕಲ್ಲಿನ ಕಂಬಗಳಿಂದ ನಿರ್ಮಾಣವಾಗಿರುವ ಮಂಟಪಗಳಲ್ಲಿ ಹಾಗೂ ಸೋಪಾನಕಟ್ಟೆ ಸೇರಿದಂತೆ ಸೇತುವೆ ಕೆಳಭಾಗದಲ್ಲಿ ನಿಂಬೆಕಾಯಿ, ಕುಂಕುಮ, ಕರ್ಪೂರ, ದೇವರ ಫೋಟೋ, ದಾರ, ಅರಿಶಿನ, ರವಿಕೆ, ತೆಂಗಿನ ಕಾಯಿ, ಮೆಣಸಿನಕಾಯಿಗಳು ರಾಶಿ ರಾಶಿ ಬಿದ್ದಿವೆ.

ನದಿ ಪಕ್ಕದ ಕಲ್ಲುಗಳ ಮೇಲೆ ವಿಚಿತ್ರವಾದ ಪೂಜೆಗಳು ನಡೆದಿರುವ ಕುರುಹುಗಳು ಕಂಡು ಬರುತ್ತಿವೆ. ಪೂಜೆಗೆ ಬಳಸುವ ಸಾಮಗ್ರಿಗಳನ್ನು ನದಿಗೆ ಎಸೆಯುವುದರಿಂದ ನದಿಯ ಒಡಲು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ಕಾವೇರಿ ನದಿಗೆ ಅಡ್ಡಲಾಗಿ ಹಾಸನ-ಮೈಸೂರು ರಸ್ತೆಯಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಕೆಳಗೆ ವಾಮಾಚಾರದ ಸಾಮಗ್ರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ರಾತ್ರಿ ಕತ್ತಲಾಗುತ್ತಿದ್ದಂತೆ ಬರುವ ಜನರು ಮಾಟ ಮಂತ್ರದ ಸರಕುಗಳನ್ನು ಅಲ್ಲಿ ಎಸೆಯುತ್ತಿದ್ದಾರೆ. ಕೆ.ಆರ್.ಎಸ್. ಜಲಾಶಯದಲ್ಲಿ ನೀರು ಇರುವುದರಿಂದ ಹಳೇ ಎಡತೊರೆವರೆಗೆ ಹಿನ್ನೀರಿನ ಸಂಗ್ರಹವಿದೆ.

” ವಾಮಾಚಾರಕ್ಕೆ ಬಳಸುವ ಮಡಕೆ, ಕುಡಿಕೆ, ಬಟ್ಟೆಗಳು ಸೇರಿದಂತೆ ದೇವರ ಗಾಜಿನ ಫೋಟೋ ಗಳನ್ನು ನದಿಗೆ ಎಸೆಯುತ್ತಿರುವುದರಿಂದ ನೀರಿನಲ್ಲಿ ಹೆಜ್ಜೆ ಇರಿಸಿದರೆ ಗಾಜಿನ ಚೂರುಗಳೇ ಚುಚ್ಚುತ್ತವೆ. ಇದೇ ರೀತಿ ಮುಂದುವರಿದರೆ ಕಾವೇರಿ ನದಿ ಸಂಪೂರ್ಣ ಕಲುಷಿತವಾಗುತ್ತದೆ. ಪುರಸಭೆ ಅಥವಾ ತಾಲ್ಲೂಕು ಆಡಳಿತ ಎಚ್ಚೆತ್ತು ಗಮನ ಹರಿಸಬೇಕಿದೆ.”

-ಜನಾರ್ಧನ್ (ಜಾನಿ), ಮುಖ್ಯ ಶಿಕ್ಷಕ, ಕುವೆಂಪು ಬಡಾವಣೆ ನಿವಾಸಿ, ಕೆ.ಆರ್.ನಗರ

 

 

Tags:
error: Content is protected !!