ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಕಲ್ಲಂಗಡಿ ಪೂರೈಕೆ; ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯ
ಮೈಸೂರು: ಬೇಸಿಗೆ ಬಿಸಿಲಿನ ದಾಹ ತಣಿಸಲು ಮಾರುಕಟ್ಟೆಗೆ ಲಗ್ಗೆ ಹಾಕಿರುವ ಕಲ್ಲಂಗಡಿ ಹಣ್ಣಿಗೆ ಈ ಬಾರಿಯೂ ಬೇಡಿಕೆ ಕಂಡು ಬರುತ್ತಿದೆ. ಚಳಿಗೆ ನಡುಗುತ್ತಿದ್ದ ಜನತೆ ಈಗ ಬಿಸಿಲಿನ ತಾಪಕ್ಕೆ ಬೆವರುತ್ತಿದ್ದು, ಋತುಮಾನ ಬದಲಾವಣೆಯಂತೆ ನಿಧಾನವಾಗಿ ಬೇಸಿಗೆಯತ್ತ ವಾಲುತ್ತಿದೆ. ಈಗಾಗಲೇ ಕಲ್ಲಂಗಡಿ, ಸೌತೆಕಾಯಿ ಹಾಗೂ ತಂಪು ಪಾನೀಯಗಳ ಮಾರಾಟಗಾರರು ಜನ ಸಂದಣಿ ಪ್ರದೇಶಗಳು, ಪ್ರಮುಖ ವೃತ್ತಗಳು ಮತ್ತು ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಾಗಗಳಿಂದ ನಂಜನಗೂಡು, ಹುಣಸೂರು, ಬೆಂಗಳೂರು, ತಿ.ನರಸೀಪುರ, ಹುಣಸೂರು ಮಾರ್ಗದ ರಸ್ತೆಗಳಿಗೆ ಕಲ್ಲಂಗಡಿ ಆಗಮಿಸುತ್ತಿವೆ.
ಪ್ರಮುಖ ಪಟ್ಟಣಗಳ ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಕಂಡುಬರುತ್ತಿದ್ದು, ಹಣ್ಣುಗಳ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚುವ ಸಾಧ್ಯತೆ ಇದೆ. ಬೆಲೆಯೂ ಜನಸಾಮಾನ್ಯರ ಕೈಗೆಟುಕುವಂತಿದೆ. ಇದು ಸಹಜವಾಗಿಯೇ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಹೆಚ್ಚು ಬಂದಿದ್ದು, ಸಾರ್ವಜನಿಕರು ಕಲ್ಲಂಗಡಿ ಹಣ್ಣು ಖರೀದಿಸಲು ಮುಗಿಬೀಳುತ್ತಿದ್ದಾರೆ.
ಚಾಮರಾಜನಗರ, ಮಂಡ್ಯ, ಹಾಸನ ಹೀಗೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಕಾವೇರಿ ನದಿಯ ಅಕ್ಕಪಕ್ಕದ ರೈತರು ಯಥೇಚ್ಛವಾಗಿ ಕಲ್ಲಂಗಡಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಶೇ.೮೦ರಷ್ಟು ಬೆಳೆ ಇಳುವರಿ ಬಂದಿದ್ದು, ಉತ್ಪಾದನೆ ೧೧೧೦.೯೩ ಲಕ್ಷ ಟನ್ಗಳಷ್ಟು ಆಗಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ ಮೊದಲನೇ ವಾರದಲ್ಲಿ ಕಟಾವಿಗೆ ಬರುತ್ತಿದ್ದ ಕಲ್ಲಂಗಡಿ ಹಣ್ಣು ಈ ಬಾರಿ ಫೆಬ್ರವರಿ ಎರಡನೇ ವಾರದಿಂದಲೇ ಬಂದಿದೆ.
ಕಳೆದ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕಲ್ಲಂಗಡಿ ೬೦ ರೂಪಾಯಿಗೆ ಮಾರಾಟವಾಗಿತ್ತು. ಈ ಬಾರಿ ಬೆಲೆ ಕಡಿಮೆ ಇದೆ. ೩೦ರಿಂದ ೪೦ ರೂಪಾಯಿಗೆ ಕೆಜಿಯಂತೆ ಕಲ್ಲಂಗಡಿ ಖರೀದಿಸುತ್ತಿದ್ದೇವೆ. ನಮಗೆ ಹಣ್ಣು ಕೊಡಿಸುವ ಮಧ್ಯವರ್ತಿಗೆ ಕೆಜಿಗೆ ೧ ರೂಪಾಯಿ ಕಮಿಷನ್ ನೀಡಲಾಗುತ್ತದೆ. ಲಾರಿ ಬಾಡಿಗೆ ರಸ್ತೆಯಲ್ಲಿ ಕಲ್ಲಂಗಡಿ ರಾಶಿ ಹಾಕುವುದರಿಂದ ಬಿಸಿಲಿಗೆ ತೂಕ ಕಡಿಮೆಯಾಗಲಿದೆ. ಈ ಎಲ್ಲಾ ಖರ್ಚು ತೆಗೆದು ನಮ್ಮ ಲಾಭಾಂಶವೂ ಸೇರಿ ೩೦ ರಿಂದ ೪೦ ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಮಾನಂದವಾಡಿ ರಸ್ತೆಯಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿರುವ ವ್ಯಾಪಾರಿ.
ಪೋಷಕಾಂಶಗಳ ಆಗರ:
ಕಲ್ಲಂಗಡಿ ಹಣ್ಣು ದಾಹ ನಿವಾರಣೆ ಮಾತ್ರವಲ್ಲದೆ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನೂ ಒದಗಿಸುತ್ತದೆ. ಇದರಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ ಹಾಗೂ ಸಿಟ್ರುಲಿನ್ ಹೆಚ್ಚಾಗಿ ಇದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ವಿಟಮಿನ್ ‘ಎ’ ಮತ್ತು ‘ಸಿ’ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜತೆಗೆ ಹೃದಯ ಆರೋಗ್ಯ, ಕಣ್ಣಿನ ರಕ್ಷಣೆ, ಚರ್ಮದ ಆರೋಗ್ಯ, ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು
ಹೊರರಾಜ್ಯಗಳಿಂದ ಆಮದು:
ಮೈಸೂರು: ಬೇಸಿಗೆ ಹಂಗಾಮಿನಲ್ಲಿ ಫೆಬ್ರವರಿಯಿಂದ ಹಂತ ಹಂತವಾಗಿ ಜೂನ್ವರೆಗೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ದಿನಕ್ಕೆ ಸರಾಸರಿ ೨೦೦೦ರಿಂದ ೪೦೦೦ ಟನ್ ಕಲ್ಲಂಗಡಿ ಹಣ್ಣು ಕರ್ನಾಟಕಕ್ಕೆ ಬರುತ್ತದೆ ಎಂದು ಅಂದಾಜಿಸಲಾಗಿದೆ.





