Mysore
22
scattered clouds

Social Media

ಮಂಗಳವಾರ, 07 ಏಪ್ರಿಲ 2026
Light
Dark

ಫುಟ್‌ಪಾತ್ ಏರಿದ ವಾಹನಗಳು; ಜನರಿಗೆ ಗೋಳು

ಪ್ರಶಾಂತ್ ಎಸ್.

ಮೈಸೂರು: ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ, ಪಾದಚಾರಿಗಳು ಫುಟ್‌ಪಾತ್‌ನಲ್ಲಿ ಓಡಾಡ ಬೇಕು ಎನ್ನುವುದು ಸಾಮಾನ್ಯ ಸಂಗತಿ. ಆದರೆ, ಕುವೆಂಪುನಗರದ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ ಜನಬಿಡಪ್ರದೇಶಗಳಾದ ಬಂದಂ ತಮ್ಮ ಕಾಳಮ್ಮ ದೇವಸ್ಥಾನ, ಅದರ ಮುಂಭಾಗ ವಿರುವ ಐಗಿರಿ ಕೆಫೆ, ಸಮೀಪದ ಸುಜುಕಿ ಷೋರೂಂ, ಪೈ ಮೊಬೈಲ್ ಶಾಪ್ ಮುಂತಾದ ಕಡೆ ಫುಟ್‌ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರದಟ್ಟಣೆ ಉಂಟಾ ಗುತ್ತಿದೆ. ಪಾದಚಾರಿಗಳು ಜೀವದ ಹಂಗು ತೊರೆದು ಅನಿವಾರ್ಯವಾಗಿ ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ದಿನಗಳಿಂದಲೂ ಈ ಸಮಸ್ಯೆಯಿದ್ದು, ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ ಎಂಬುದು ಹಲವರ ದೂರು.

ಅಂಗಡಿ ಮತ್ತು ಐಗಿರಿ ಕೆಫೆಯಿಂದಲೇ ಸಮಸ್ಯೆ: ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿ ಮತ್ತು ಹೋಟೆಲ್ ಮಾಲೀಕರು, ತಮ್ಮ ಅಂಗಡಿ ಮಳಿಗೆಗಳ ಮುಂದಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಲ್ಲಿ ಅವರ ಮಾರಾಟ ವಸ್ತುಗಳು, ಜಾಹೀರಾತು ಫಲಕಗಳನ್ನು ಇರಿಸಲೋ ಅಥವಾ ವಾಹನಗಳನ್ನು ನಿಲ್ಲಿಸಿಕೊಳ್ಳಲೋ ಬಳಕೆ ಮಾಡಿಕೊಳ್ಳುವುದು ಪರಿಪಾಠವಾಗಿದೆ. ಅಂಗಡಿ ಮಳಿಗೆ ಎದುರಿನ ಜಾಗ ತಮ್ಮದೆಂಬಂತೆ ಮಾಲೀಕರು ವರ್ತಿಸುತ್ತಿದ್ದಾರೆ ಎಂಬ ಆರೋಪ ಕೆಲವು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬಂದಿದೆ.

ಜಟಾಪಟಿ: ಹೆಚ್ಚು ಜನದಟ್ಟಣೆ ಇರುವ ಸಮಯವಾದ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ನಗರದ ಪ್ರಮುಖ ರಸ್ತೆಗಳು ಗಿಜಿಗುಡುತ್ತವೆ. ನಡೆದು ಹೋಗುವಾಗ ಸಾರ್ವಜನಿಕರಿಗೆ ವಾಹನಗಳು ತಾಗುವುದು, ವಾಹನ ಸವಾರರು ಮತ್ತು ಪಾದಚಾರಿಗಳ ನಡುವೆ ಜಟಾಪಟಿ ನಿತ್ಯ ಸಾಮಾನ್ಯವಾಗಿದೆ. ಸಾರ್ವಜನಿಕರೂ ಪರಿಸ್ಥಿತಿಗೆ ಹೊಂದಿಕೊಂಡು, ತಮಗೆ ಅರಿವಿಲ್ಲದಂತೆಯೇ ರಸ್ತೆಗಳನ್ನೇ ಫುಟ್‌ಪಾತ್‌ಗಳಂತೆ ಬಳಸುತ್ತಿದ್ದಾರೆ. ಆದರೆ ಅಪಾಯವನ್ನು ತಮ್ಮ ಮೈಮೇಲೆಳೆದುಕೊಳ್ಳುತ್ತಿರುವುದರ ಅರಿವು ಹಲವರಿಗೆ ಇಲ್ಲದಾಗಿದೆ.

ಅಂಗಡಿ ಷೋರೂಂಗಳು ಮತ್ತು ಐಗಿರಿ ಕೆಫೆ ಹೋಟೆಲ್‌ಗಳು ತಮ್ಮ ಜಾಹೀರಾತು ಫಲಕಗಳನ್ನು ಪಾದಚಾರಿ ಮಾರ್ಗಗಳಿಗೆ ಅಡ್ಡಲಾಗಿ ಇಡುವುದರಿಂದ ರಾಜಾರೋಷವಾಗಿ ಫುಟ್ ಪಾತ್‌ಗಳ ಅತಿಕ್ರಮಣ ನಡೆಯುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಅಸಹಾಯಕರಾಗಿದ್ದಾರೆ

” ನಗರಪಾಲಿಕೆ ವತಿಯಿಂದ ಅಂಗಡಿ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸ ಅಂಗಡಿ ಬೋರ್ಡ್‌ಗಳನ್ನು ಸ್ವಲ್ಪ ಹಿಂದಕ್ಕೆ ಹಾಕಿಕೊಳ್ಳಲು ಸೂಚಿಸುವುದರ ಜೊತೆಗೆ ವಾಹನಗಳನ್ನು ಫುಟ್‌ಪಾತ್ ಮೇಲೆ ನಿಲ್ಲಿಸದಂತೆ ಹೇಳಿ, ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ.”

-ಶೇಖ್ ತನ್ವೀರ್ ಆಸಿಫ್, ನಗರಪಾಲಿಕೆ ಆಯುಕ್ತರು

” ಐಗಿರಿ ಕೆಫೆ ಮುಂಭಾಗದ ಈ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚು ಜನದಟ್ಟಣೆ ಉಂಟಾಗುವುದರಿಂದ ವಯೋವೃದ್ಧರು, ಮಹಿಳೆಯರು, ಮಕ್ಕಳು, ಓಡಾಡುವುದೇ ದುಸ್ತರವಾಗುತ್ತದೆ. ಫುಟ್‌ಪಾತ್ ಗಳ ಮೇಲೆ ನಿಲ್ಲಿಸಲಾಗುವ ವಾಹನಗಳನ್ನು ತೆರವುಗೊಳಿಸಿದರೆ ಸುಗಮವಾಗಿ ನಡೆದು ಹೋಗಬಹುದು.”

-ಸೋಮು, ಜೆ.ಪಿ.ನಗರ ನಿವಾಸಿ

” ಸಾರ್ವಜನಿಕರ ಹಿತರಕ್ಷಣೆ ನಮ್ಮ ಕರ್ತವ್ಯ. ಹಾಗಾಗಿ ಸಮಸ್ಯೆ ಆಗಿರುವ ಐಗಿರಿ ಕೆಫೆ, ಪೈ ಮೊಬೈಲ್ ಶಾಪ್, ಸುಜುಕಿ ಷೋರೂಂಗಳ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡುವುದರ ಜೊತೆಗೆ ಸಾರ್ವಜನಿಕರಿಗೆ, ವಯೋವೃದ್ಧರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಲಾಗುವುದು.”

 -ಕೆ.ಎಸ್. ಸುಂದರ್‌ರಾಜ್, ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಭ 

 

 

Tags:
error: Content is protected !!