Mysore
29
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ನಗರೀಕರಣದಿಂದ ಮಾದಗಳ್ಳಿ ಕೆರೆಗೆ ಕಂಟಕ

  • ಕುಕ್ಕರಹಳ್ಳಿ ಕೆರೆಯ ಜಲಮೂಲ ಉಳಿವಿಕೆ ಅಭಿಯಾನ
  • ಅಭಿಯಾನಕ್ಕೆ ಹೆಚ್ಚುತ್ತಿರುವ ಜನಬೆಂಬಲ
  • ನಾಲಾ ನಡಿಗೆ, ನಾಲಾ ಹಬ್ಬ ಆಚರಿಸಲು ನಿರ್ಧಾರ

ಗಿರೀಶ್‌ ಹುಣಸೂರು

ಮೈಸೂರು : ಹೆಚ್ಚುತ್ತಿರುವ ನಗರೀಕರಣದಿಂದಾಗಿ ಅಭಿವೃದ್ಧಿ ಹೆಸರಿನ ‘ರಾಕ್ಷಸಿ ಹೊಡೆತ’ದ ಪರಿಣಾಮ ಹಳ್ಳಿಗಾಡಿನ ಕೆರೆಕಟ್ಟೆಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿದ್ದು, ಪಾರಂಪರಿಕ ಜಲಮೂಲಗಳ ಉಳಿವು ಸ್ಥಳೀಯ ಜನರ ಹಕ್ಕು’ ಎಂಬ ಮನೋಭಾವ ಬೆಳೆದು ಜಲ ಮೂಲ ಉಳಿಸಿ ಗಳನ್ನು ಕೊಳ್ಳಲು ಮುಂದಾಗ ಬೇಕಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರದ ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ದಶಕಗಳಿಂದದ ಅಭಿವೃದ್ಧಿಯ ಹೆಸರಿನಲ್ಲಿ ಹೊಡೆತ ಬೀಳುತ್ತಲೇ ಇದೆ. ಮೈಸೂರು ಮಹಾನಗರ ಪಾಲಿಕೆಯನ್ನು ಸರ್ಕಾರ ಬೃಹತ್ ಮಹಾ ನಗರಪಾಲಿಕೆಯನ್ನಾಗಿಸಿ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ಇದರಿಂದ ಮೈಸೂರು ನಗರದ ವ್ಯಾಪ್ತಿ ಇನ್ನಷ್ಟು ಹಿಗ್ಗಿ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ. ಹೀಗಾಗಿ ಜಲಮೂಲಗಳ ಉಳಿವಿಗಾಗಿ ಜನ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರು ವಾಟರ್‌ಫೋರಂ ಇನ್ನಿತರೆ ಸಂಘಟನೆಗಳ ಜೊತೆ ಗೂಡಿ ಬೋಗಾದಿ-ಗದ್ದಿಗೆ ರಸ್ತೆಯಲ್ಲಿರುವ ‘ಮಾದಗಳ್ಳಿ ಕೆರೆ’ಯ ಸ್ವಚ್ಛತಾ ಅಭಿಯಾನ ನಡೆಸುತ್ತಾ ಬಂದಿದೆ.

ಮೈಸೂರು ನಗರದ ಜೀವನಾಡಿ ಕುಕ್ಕರಹಳ್ಳಿ ಕೆರೆಯ ಜಲಮೂಲವಾದ ಪಾರಂಪರಿಕ ಪೂರ್ಣಯ್ಯ ನಾಲೆ ಆರಂಭವಾಗುವ ತಾಲ್ಲೂಕಿನ ಸಾಹುಕಾರ್ ಹುಂಡಿ ಗ್ರಾಮದ ವ್ಯಾಪ್ತಿಗೆ ಸೇರಿದ ಮಾದಗಳ್ಳಿ ಕೆರೆಗೆ ಹುಯಿಲಾಳು ಕೆರೆಯಿಂದ ನೀರು ಹರಿದು ಬರುತ್ತದೆ. ಇಲ್ಲಿಂದ ಪೂರ್ಣಯ್ಯ ನಾಲೆಯ ಮೂಲಕ ಕುಕ್ಕರಹಳ್ಳಿ ಕೆರೆಗೆ ನೀರು ಹರಿದು ಬರುತ್ತದೆ. ಮಾದಗಳ್ಳಿ ಕೆರೆಯ ಒಂದು ಭಾಗದಲ್ಲಿ 150 ವರ್ಷಗಳಷ್ಟು ಹಳೆಯ ಅಣೆಕಟ್ಟೆ ಇದೆ. ಇಲ್ಲಿನ ನ್ಯೂಸ್‌ ಗೇಟ್ (ತೂಬು)ಗಳಿವೆ. ಕೆರೆಯ ಮತ್ತೊಂದೆಡೆ 300 ವರ್ಷಗಳಿಗೂ ಹಳೆಯದಾದ ಕೋಡಿ ಕಟ್ಟೆಯಿದೆ. ಜೀವವೈವಿಧ್ಯದ ಬಟ್ಟಲಾಗಿರುವ ಈ ಕೆರೆಯ ಸಂರಕ್ಷಣೆಗೆ ಮೈಸೂರು ವಾಟರ್‌ಫೋರಂ ನೇತೃತ್ವ ವಹಿಸಿದ್ದು, ಹತ್ತಾರು ಸಂಘಟನೆಗಳನ್ನು ಒಳಗೊಳ್ಳುತ್ತಾ ಕೆರೆಯ ಒಡಲಲ್ಲಿ ಬೀಸಾಡಿರುವ ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದ್ದು, ಕಳೆದ ವರ್ಷ 70ಕ್ಕೂ ಹೆಚ್ಚು ನಾಗರಿಕರು ಸೇರಿ 30ಕ್ಕೂ ಹೆಚ್ಚು ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಈ ವರ್ಷ ಫೆ.8ರಂದು ಬೆಂಗಳೂರು ಸಸ್ಟೇನಬಲಿಟಿ ಫೋರಂ ಬೆಂಬಲದೊಂದಿಗೆ ದೊಡ್ಡಕೆರೆ ಹಿತರಕ್ಷಣಾ ಸಮಿತಿ, ಅರಣ್ಯಔಟ್‌ ರೀಚ್ ಮತ್ತು ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಟರ್‌ನ 55 ಪರಿಸರ ಪ್ರೇಮಿಗಳು ಒಗ್ಗೂಡಿ ಮದ್ಯದ ಬಾಟಲಿ, ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಹೂವಿನ ಹಾರಗಳು ಸೇರಿ 30 ಚೀಲಗಳಷ್ಟು ತ್ಯಾಜ್ಯವನ್ನು ತೆರವು ಮಾಡಿದ್ದಾರೆ. ಜನಜಾಗೃತಿಯ ನಡುವೆಯೂ ಪ್ರತಿ ವರ್ಷ ಕೆರೆಯ ಒಡಲು ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವು ಮಾಡಬೇಕಾಗಿ ಬಂದಿರುವುದು ದುರಂತವೇ ಸರಿ.

ಈ ಬಗ್ಗೆ ಮಾತನಾಡಿರುವ ಪರಿಸರ ತಜ್ಞ ಯು.ಎನ್.ರವಿಕುಮಾರ್, ಪಾರಂಪರಿಕ ಪೂರ್ಣಯ್ಯನಾಲೆ ಮತ್ತು ಅದಕ್ಕೆ ಜಲಮೂಲವಾಗಿರುವ ಮಾದಗಳ್ಳಿ ದೊಡ್ಡಕೆರೆ, ಹುಯಿಲಾಳು ಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ಕಳೆದ ವರ್ಷವೂ ಕೆರೆಯ ಸ್ವಚ್ಛತಾ ಅಭಿಯಾನ ನಡೆಸಿದ್ದೆವು. ಈ ವರ್ಷ ಮಾದಗಳ್ಳಿ, ಶೌರೀಸ್ ಬಡಾವಣೆ ನಿವಾಸಿಗಳು, ಮಕ್ಕಳು, ಕಲಾವಿದರು ಪಾಲ್ಗೊಂಡಿದ್ದು ಸಂತಸ ತಂದಿದೆ. ಕೆರೆಯ ಒಡಲಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಗಸ್ತು ಹೆಚ್ಚಿಸಬೇಕಿದೆ ಎಂದಿದ್ದಾರೆ.

ಮಾದಗಳ್ಳಿ ಕೆರೆ ಮತ್ತು ಪೂರ್ಣಯ್ಯ ನಾಲೆ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜನ ಜಾಗೃತಿಯನ್ನು ಇನ್ನಷ್ಟು ವ್ಯಾಪಕಗೊಳಿಸಲು ‘ನಾಲಾ ನಡಿಗೆ’ ಮತ್ತು ಪ್ರತಿ ತಿಂಗಳೂ ‘ನಾಲಾ ಹಬ್ಬ’ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಯ್ಯಾಜಿರಾವ್ ರಸ್ತೆ ನಿರ್ಮಿಸಲು ಪೂರ್ಣಯ್ಯ ನಾಲೆಯನ್ನು ಮುಚ್ಚಿ ಹಾಕಲಾಯಿತು. ಹೀಗಾಗಿ ಮೈಸೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಒಣಪ್ರದೇಶದಲ್ಲಿದ್ದ ಕೆರೆಗಳನ್ನೆಲ್ಲ ಒಗ್ಗೂಡಿಸಿ ಮಾದಗಳ್ಳಿ ಕೆರೆಯಿಂ ಕೆರೆಗೆ ನೀರು ತರಲು ಎರಡನೇ ಪೂರ್ಣಯ್ಯ ನಾಲೆಯ ನಿರ್ಮಾಣ ಕಾರ್ಯ 1864ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ಮಾದಗಳ್ಳಿ ಕೆರೆಯ ಮೇಲ್ಬಾಗದ ಎಂಟು ಕೆರೆಗಳಿಂದ ಹುಯಿಲಾಳು ಕೆರೆಗೆ ನೀರು ಹರಿದುಬರುತ್ತದೆ. ಅಲ್ಲಿಂದ ನಾಲೆಗಳ ಮೂಲಕ ಮಾದಗಳ್ಳಿ ದೊಡ್ಡಕೆರೆಗೆ ಸೇರುತ್ತದೆ. ಕೆರೆ ತುಂಬಿದಾಗ ತೂಬುಗಳ ಮೂಲಕ ಹರಿದು ಬಂದು ಕುಕ್ಕರಹಳ್ಳಿ ಕೆರೆಗೆ ಸೇರುತ್ತದೆ. ಕುಕ್ಕರಹಳ್ಳಿ ಕೆರೆಗೆ ಅಚ್ಚುಕಟ್ಟು ಪ್ರದೇಶ ಕಡಿಮೆ. ಪೂರ್ಣಯ್ಯ ನಾಲೆಯಿಂದ ಹರಿದು ಬರುವ ನೀರಿನಿಂದಲೇ ಕುಕ್ಕರಹಳ್ಳಿ ಕೆರೆ ತುಂಬುತ್ತಿತ್ತು. ಆದರೆ, 1990ರ ದಶಕದಲ್ಲಿ ಪೂರ್ಣಯ್ಯ ನಾಲೆಯ ಮೇಲೆಯೇ ವಿಜಯ ನಗರ ಬಡಾವಣೆಯನ್ನು ನಿರ್ಮಿಸಿದ್ದರಿಂದ ನಾಲೆ ಹಾಳಾಗಿದೆ. ಕೊನೆಯ 6 ಕಿ.ಮೀ.ನಾಲೆ ಉಳಿಸಿಕೊಳ್ಳಲು 1995ರಿಂದಲೇ ಹೋರಾಟ ಮಾಡುತ್ತಿದ್ದೇವೆ. ಆಳುವವರು ಕೊಟ್ಟ ಭರವಸೆಗಳು ಈವರೆಗೂ ಈಡೇರಿಲ್ಲ. ಹಾಗೆ ನೋಡಿದರೆ ಮಾದಗಳ್ಳಿ ಕೆರೆಯಿಂದ ಆರಂಭವಾಗುವ ನಾಲೆಯ 9ಕಿ.ಮೀ ಉಳಿದುಕೊಂಡಿದೆ. ಅದರ ಪುನರುಜ್ಜಿವನವಾಗಬೇಕಿದೆ. ಇದರಿಂದ ದಿಬ್ಬ ಪ್ರದೇಶದಲ್ಲಿರುವ ಮಾದಗಳ್ಳಿ ದೊಡ್ಡಕೆರೆಯಲ್ಲಿ ನೀರು ಇಂಗಲು ಸಾಧ್ಯವಾಗಲಿದೆ. ಮಧ್ಯದ ಪ್ರದೇಶ ಬಿಟ್ಟು ಕೊನೆಯ 6 ಕಿ. ಮೀನಾಲೆ ಉಳಿಸಿಕೊಂಡರೆ ಕುಕ್ಕರಹಳ್ಳಿಗೆ ನೀರು ಬರಲಿದೆ. ಸುಮಾರು 80 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯಲ್ಲಿ ನೀರು ಇಂಗಿಸಿ ಆರ್ಧತೆ ಕಾಪಾಡಿಕೊಳ್ಳುವುದು ಜಾಗತಿಕ ಹವಾಮಾನ ಬದಲಾವಣೆಗೆ ಉತ್ತರವಾಗಲಿದೆ. ಇದಕ್ಕಾಗಿ ಈ ಅಭಿಯಾನ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ.

Tags:
error: Content is protected !!