ಪ್ರಶಾಂತ್ ಎಸ್.
ತೊಗಲು ಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನಕ್ಕೆ ಚಾಲನೆ
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸಿದ್ದಾರ್ಥನಗರದ ಶ್ರೀ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು(ಕಾವಾ) ಆವರಣದಲ್ಲಿ ಆಯೋಜಿಸಿರುವ ತೊಗಲು ಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನಕ್ಕೆ ಚಾಲನೆ ದೊರೆಯಿತು.
ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ವತಿಯಿಂದ ಪ್ರದರ್ಶಿಸಲಾದ ಭಿತ್ತಿ ಚಿತ್ತಾರ, ಗೋಡೆ ಚಿತ್ತಾರಗಳು ಸಾಮಾಜಿಕ ಸಂದೇಶವನ್ನು ಸಾರಿದವು. ಕಾವಾ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಕೈಚಳಕ ದಲ್ಲಿ ಅರಳಿರುವ ಕಲಾ ಕೃತಿಗಳು ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ತೆರೆದಿಟ್ಟವು.
ಆಟೋಟವಿಲ್ಲ, ಮೊಬೈಲೇ ಎಲ್ಲಾ!: ಇಂದಿನ ಮಕ್ಕಳಿಗೆ ಹೊರಾಂಗಣ ಆಟೋಟಗಳಿಗೆ ಅವಕಾಶ ಕಡಿಮೆಯಾಗಿರುವುದರಿಂದ ಅನಿವಾರ್ಯವಾಗಿ ಮನೆಯಲ್ಲೇ ಉಳಿಯುತ್ತಿದ್ದು, ಪೋಷಕರಿಂದ ಹಠ ಮಾಡಿ ಮೊಬೈಲ್ ಫೋನ್, ಟ್ಯಾಬ್ಗಳನ್ನು ಪಡೆಯುತ್ತಿದ್ದು, ಮೊಬೈಲ್ ವ್ಯಸನಕ್ಕೆ ಬಲಿಯಾಗುತ್ತಿರುವ ಮಕ್ಕಳ ಊಟ, ನಿದ್ರೆ ಮೊದಲಾದ ದೈನಂದಿನ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮೊಬೈಲ್ ಸ್ಕ್ರೀನ್ ಮೇಲೆ ಆಗುವ ಬೆಳಕಿನ ವ್ಯತ್ಯಾಸಗಳು ಕಣ್ಣುಗಳ ಮುಖಾಂತರ ಮೆದುಳಿನ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಕಲಾಕೃತಿಗಳ ಮೂಲಕ ಕಲಾವಿದರು ಅನಾವರಣಗೊಳಿಸಿದರು.
ಕಾವಾ ಗೋಡೆಗಳಲ್ಲಿ ವಿಭಿನ್ನ ಕಲಾ ಪ್ರದರ್ಶನ: ವರ್ಲಿ ಕಲೆ, ಹಲವು ಶೈಲಿಯ ರೇಖಾ ಚಿತ್ರಗಳು, ಗಾಮೀಣ ಜನರ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತಿದ್ದು, ಪ್ರೇಕ್ಷಕರ ಗಮನ ಸೆಳೆದವು.
ಕಾವಾ ಹುದ್ದೆಗಳ ಭರ್ತಿಗೆ ಕ್ರಮ: ತಂಗಡಗಿ
ಮೈಸೂರು: ಕಾವಾದಲ್ಲಿ ಈಗಾಗಲೇ ೫೯ ಹುದ್ದೆಗಳು ಖಾಲಿ ಇದ್ದು, ಈ ಪೈಕಿ ೧೬ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ ಹುದ್ದೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ಶಿವರಾಜ ಸಂಗಪ್ಪ ಹೇಳಿದರು. ತೊಗಲು ಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವಾ ಕಾಲೇಜಿನ ಆವರಣದಲ್ಲಿಯೇ ಒಂದು ವಿಭಿನ್ನವಾದ ಕಲಾ ಗ್ಯಾಲರಿಯನ್ನು ನಿರ್ಮಾಣ ಮಾಡುವ ಚಿಂತನೆ ಇದೆ. ಕಾವಾ ಸಂಸ್ಥೆಯನ್ನು ಎಲ್ಲರ ಗಮನಸೆಳೆಯುವಂತೆ ಮಾಡಲು ಸಹಕರಿಸಲಾಗುವುದು ಎಂದು ಹೇಳಿದರು. ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎಂ.ವಿ.ವೆಂಕ ಟೇಶ್,ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಹಾಜರಿದ್ದರು.





