Mysore
25
scattered clouds

Social Media

ಮಂಗಳವಾರ, 17 ಮಾರ್ಚ್ 2026
Light
Dark

ಈ ರಸ್ತೆಯಲ್ಲಿ ಸಂಚಾರ ಪ್ರಾಣಕ್ಕೆ ಸಂಚಕಾರ!

ಶ್ರೀಧರ್ ಆರ್. ಭಟ್

ದೇವರಸನಹಳ್ಳಿ ರಸ್ತೆ ಅವ್ಯವಸ್ಥೆಯಿಂದ ಹೈರಾಣಾದ ಸವಾರರು; ರಸ್ತೆ ಅಭಿವೃದ್ಧಿಗೆ ಆಗ್ರಹ

ನಂಜನಗೂಡು: ‘ಸುಲಭ ಹೆರಿಗೆಗಾಗಿ ಈ ರಸ್ತೆಯಲ್ಲಿ ಸಂಚರಿಸಿ’ ಎಂದು ಫಲಕವನ್ನಂತೂ ಇಲ್ಲಿ ಹಾಕಿಲ್ಲ. ಆದರೆ ಈ ರಸ್ತೆಯಲ್ಲಿ ಸಂಚರಿಸಿದವರ ಬಾಯಲ್ಲಿ ಈ ಉದ್ಗಾರ ಬರಿಸುತ್ತದೆ ದೇವರಸನಹಳ್ಳಿ ರಸ್ತೆ ಅವ್ಯವಸ್ಥೆ.

ಪ್ರತಿನಿತ್ಯ ಸಾವಿರಾರು ಜನರು ಹಾಗೂ ವಾಹನಗಳು ಸಂಚರಿಸುವ ನಂಜನಗೂಡು ರಸಬಾಳೆ ಖ್ಯಾತಿಯ ದೇವರಸನಹಳ್ಳಿಗೆ ತಲುಪುವ ಮುಖ್ಯ ರಸ್ತೆಯಲ್ಲಿ ಗುಂಡಿಯಲ್ಲಿ ರಸ್ತೆಯೋ ಅಥವಾ ರಸ್ತೆಯಲ್ಲೇ ಗುಂಡಿಗಳೋ ಎಂಬುದೇ ತಿಳಿಯದಂತಾಗಿದೆ.

ನಂಜನಗೂಡು ನಗರದ ಹಳ್ಳದಕೇರಿಯಿಂದ ದೇವರಸನಹಳ್ಳಿ ಮೂಲಕ ಹೊಸೂರು, ಮಾಡ್ರಳ್ಳಿ, ಕೆಬ್ಬೇಪುರ, ಉಪ್ಪನಳ್ಳಿ, ಶ್ರೀನಗರ ಮೂಲಕ ಎಡಕ್ಕೆ ತಿರುಗಿದರೆ ಹೆಡತಲೆ, ಬಲಕ್ಕೆ ತೆರಳಿದರೆ ಕಳಲೆ ಗೇಟ್ ತಲುಪಬಹುದಾದ ಕೃಷಿಕರು, ಕಾರ್ಮಿಕರು, ಶಾಲಾ ಬಾಲಕ-ಬಾಲಕಿಯರು ನಿತ್ಯ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಈ ರಸ್ತೆ ಈ ದಶಕದ ಆರಂಭದಲ್ಲಿ ಡಾಂಬರು ಕಂಡಿದ್ದು ಬಿಟ್ಟರೆ ಮುಂದೆಂದೂ ದುರಸ್ತಿ ಕಂಡೇ ಇಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ದಕ್ಷಿಣ ಕಾಶಿ ಶ್ರೀಕಂಠೇಶ್ವರನ ಸನ್ನಿಧಿಯಿಂದ ಕೇವಲ ೩ ಕಿ.ಮೀ. ದೂರದ ದೇವರಸನಹಳ್ಳಿ ಹಾಗೂ ಮುಂದಿನ ಊರುಗಳ ಜನತೆಯ ಪಾಲಿಗೆ ಈ ರಸ್ತೆಯ ಪ್ರಯಾಣ ನರಕಯಾತನೆಯಾಗಿದೆ. ಎಡ-ಬಲದಲ್ಲಿ ಹುಲ್ಲಹಳ್ಳಿ ಕಬಿನಿ, ನುಗು ಹಾಗೂ ನರಸಾಂಬುಧಿ ಕೆರೆಯ ನೀರಿನ ಹಸಿರು ಗದ್ದೆಗಳ ಮಧ್ಯೆ ಸಾಗುವ ಇಲ್ಲಿ ವಾಹನ ಚಾಲಕರು ರಸ್ತೆಯ ಒಂದು ಗುಂಡಿ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಸರಿದರೆ ಮೂರು ಗುಂಡಿಗಳನ್ನು ಹತ್ತಿಳಿಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಗುಂಡಿಗಳಿಂದಲೇ ಆವೃತವಾದ ಇಲ್ಲಿ ಬೇಸಿಗೆಯಾದರೆ ದೂಳಿನ ಸ್ನಾನ, ಮಳೆಗಾಲವಾದರೆ ಕೆಸರಿನ ಗದ್ದೆಯಲ್ಲಿ ಓಡಾಡಿದಂತಾಗುತ್ತದೆ. ಹೀಗಾಗಿ ಸವಾರರು ಜೀವ ಕೈನಲ್ಲಿ ಹಿಡಿದುಕೊಂಡು ಭಯದಿಂದಲೇ ವಾಹನ ಚಾಲನೆ ಮಾಡಬೇಕಾಗಿದೆ. ಈಗಾಗಲೇ ನೂರಾರು ಜನರು ಇಲ್ಲಿ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ.

” ಹಿಂದಿನ ಜನಪ್ರತಿನಿಽಗಳ ತಾತ್ಸಾರದಿಂದಾಗಿ ಈ ರಸ್ತೆ ದುಸ್ಥಿತಿಗೆ ತಲುಪಿದೆ. ರಸ್ತೆ ದುರಸ್ತಿಗಾಗಿ   ಒತ್ತಾಯಿಸಿ ಅನೇಕ ಪ್ರತಿಭಟನೆಗಳನ್ನು ನಡೆಸಿ ಕಂಡ ಕಂಡವರಿಗೆ ಮನವಿ ನೀಡಿದ್ದು, ಈವರೆಗೂ ಪ್ರಯೋಜನವಾಗಿಲ್ಲ. ಈ ರಸ್ತೆ ಅವ್ಯವಸ್ಥೆಯನ್ನು ಕಂಡ ಹಾಲಿ ಶಾಸಕರು ದೇವರಸನಹಳ್ಳಿ ರಸ್ತೆಯ ಅಭಿವೃದ್ಧಿಗಾಗಿ ೧೮ ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದು ಕೆಲವೇ ದಿನಗಳಲ್ಲಿ ಅದು ಮಂಜೂರಾಗಿ ಕೆಲಸ ಆರಂಭವಾಗಬಹುದು.”

-ಮುದ್ದುಮಾದಶೆಟ್ಟಿ, ದೇವರಸನಹಳ್ಳಿ ಗ್ರಾಪಂ ಸದಸ್ಯ

” ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪಂಚಾಯಿತಿಯವರು ಏನೂ ಮಾಡಿಲ್ಲ. ರಸ್ತೆ ಅವ್ಯವಸ್ಥೆ ಕುರಿತಂತೆ ಒಂದು ನಿರ್ಣಯವನ್ನೂ ಕೈಗೊಂಡಿಲ್ಲ. ಶಾಸಕರು, ಸಂಸದರಾದವರು ಇತ್ತ ಮುಖ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿ ಕಳಲೆಯವರೆಗೂ ಈ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನಡೆಯಿತು. ಆದರೆ ದುರಸ್ತಿ ಕಳಲೆ ಗೇಟ್ ದಾಟಿ ಮುಂದೆ ಬಂದೇ ಇಲ್ಲ. ಬಿಡುಗಡೆಯಾದ ಹಣ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ೧೦ ವರ್ಷಗಳಿಂದ ಈ ರಸ್ತೆಯಲ್ಲಿ ಆಟೋ ಚಲಾಯಿಸಿ ಜೀವನವೇ ಸಾಕು ಎಂಬಂತಾಗಿದೆ.”

ಸಿದ್ದರಾಜು, ಆಟೋ ಚಾಲಕ

” ೨೦ ವರ್ಷಗಳಿಂದ ನಮ್ಮೂರ ರಸ್ತೆಗೆ ಡಾಂಬರು ಹಾಕುವುದು ಇರಲಿ, ಹಿಡಿ ಮಣ್ಣನ್ನೂ ಹಾಕಿಲ್ಲ. ಹಾಗಾಗಿ ರಸ್ತೆ ಈ ಹಂತ ತಲುಪಿದೆ. ಈಗಲೂ ರಸ್ತೆ ಅಭಿವೃದ್ಧಿಯಾಗದಿದ್ದರೆ ಮುಂದಿನ ಮಳೆಗಾಲ ಕಳೆಯುವುದರೊಳಗೆ ಇಲ್ಲೊಂದು ರಸ್ತೆ ಇತ್ತಾ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.”

-ರಾಜು, ದೇವರಸನಹಳ್ಳಿ

Tags:
error: Content is protected !!