ಮಡಿಕೇರಿಗೆ ಬಂದಿದ್ದ ಕೇರಳ ಮೂಲದ ಟ್ರೆಕ್ಕರ್
ಮಡಿಕೇರಿ: ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಪ್ರವಾಸಿ ತಾಣವಾದ ತಡಿ ಯಂಡಮೋಳ್ ಬೆಟ್ಟದಲ್ಲಿ ನಡೆದಿದೆ.
ಕೇರಳ ರಾಜ್ಯದ ಕೊಚ್ಚಿ ಮೂಲದ ಜಿ.ಎಸ್.ಶರಣ್ಯ (೩೬) ನಾಪತ್ತೆಯಾದವರು. ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಬಂದಿದ್ದ ಶರಣ್ಯ, ಆನ್ಲೈನ್ನಲ್ಲಿ ಹೋಂ ಸ್ಟೇವೊಂದನ್ನು ಬುಕ್ಕಿಂಗ್ ಮಾಡಿಕೊಂಡು ತಂಗಿದ್ದರು.
ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕಾಗಿ ಅರಣ್ಯ ಇಲಾಖೆ ವೆಬ್ಸೈಟ್ನಲ್ಲಿ ನೋಂದಾಯಿಸಿ ಕೊಂಡಿದ್ದ ಶರಣ್ಯ, ಗುರುವಾರ ಬೆಳಿಗ್ಗೆ ೮.೧೫ಕ್ಕೆ ಬೆಟ್ಟದ ಬಳಿ ಬಂದಿದ್ದರು. ಅವರ ದಾಖಲೆ ಪರಿಶೀಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಒಬ್ಬರೇ ಟ್ರಕ್ಕಿಂಗ್ ಹೋಗಬಾರದು ಎಂದು ತಿಳಿಸಿ, ಒಂದು ಗುಂಪಿನೊಂದಿಗೆ ಜೊತೆ ಮಾಡಿ ಕಳುಹಿಸಿದ್ದಾರೆ.
ಸಂಜೆ ವೇಳೆಗೆ ಆ ಗುಂಪು ಹಿಂದಿರುಗಿದರೂ ಶರಣ್ಯ ಅವರು ವಾಪಸ್ ಆಗಲಿಲ್ಲ. ಹೀಗಾಗಿ ಅರಣ್ಯ ವೀಕ್ಷಕ ಮಂಜುನಾಥ್ ಬೆಟ್ಟಕ್ಕೆ ತೆರಳಿ ಶರಣ್ಯ ಅವರಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಪತ್ತೆಯಾಗಲಿಲ್ಲ. ಹಿಂದಿರುಗಿದ ಮಂಜುನಾಥ್, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಲಾಗುತ್ತಿದೆ.
ಗುರುವಾರ ರಾತ್ರಿಯಿಡೀ ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳು ಸ್ಥಳೀಯರ ನೆರವಿನೊಂದಿಗೆ ಬೆಟ್ಟದಲ್ಲಿ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರವೂ ಶೋಧ ಮುಂದುವರಿಸಿದ್ದಾರೆ. ಆದರೆ ಸಂಜೆಯವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಽಕಾರಿಗಳು ಮಾಹಿತಿ ನೀಡಿದ್ದಾರೆ.





