ಎಸ್.ಎಸ್.ಭಟ್
ಕಪಿಲಾ ತೀರದ ಸ್ನಾನಘಟ್ಟದಲ್ಲಿ ಬಕೆಟ್ ನೀರಿಗೆ ೫೦-೧೦೦ ರೂ. ಸುಲಿಗೆ ಎಂದು ಭಕ್ತಾದಿಗಳ ಆರೋಪ
ನಂಜನಗೂಡು: ಹಿಮಾಲಯದಲ್ಲಿ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ. ಅಥವಾ ೧೦ ರೂ. ಆದರೆ ಕಪಿಲಾ ತೀರದ ನಂಜನಗೂಡಿನಲ್ಲಿ ೫೦ ರೂ.ನಿಂದ ೧೦೦ ರೂ.ಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನಜಾವ ಸೇರಿದಂತೆ ಚಳಿಯಲ್ಲಿ ತೀರ್ಥಸ್ನಾನ ಮಾಡುವುದು ಸಂಪ್ರದಾಯ. ಅದಕ್ಕಾಗಿಯೇ ಸ್ನಾನಘಟ್ಟದಲ್ಲಿ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಿಸಿರುವ ದೇವಾಲಯ, ಕೆಲ ವರ್ಷಗಳ ಹಿಂದಿ ಭಕ್ತರ ಬಿಸಿ ನೀರಿನ ಜಳಕಕ್ಕಾಗಿ ೨ ಬಾಯ್ಲರ್ಗಳನ್ನು ಸ್ಥಾಪಿಸಿ ಸ್ನಾನ ಮಾಡುವವರಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿ, ದೇವಾಲಯದ ಖಾಯಂ ನೌಕರರಿಗೆ ಇದರ ಜವಾಬ್ದಾರಿ ನೀಡಲಾಯಿತು.
ಪ್ರಾರಂಭದಲ್ಲಿ ಒಂದು ಬಕೆಟ್ಗೆ ೫, ೧೦ ರೂ. ನೀಡಬೇಕಾಗಿತ್ತು. ಇದು ಗೊತ್ತಾದ ನಂತರ ಬಿಸಿ ನೀರು ಉಚಿತ ಎಂದು ಘೋಷಿಸಲಾಯಿತು. ಆದರೆ ಕ್ರಮೇಣ ಬಿಸಿ ನೀರು ದೇವಾಲಯದ ಪಾಲಿಗೆ ಉಚಿತವಾಗಿ, ಭಕ್ತರ ಜೇಬಿಗೆ ಕನ್ನವಾಗಿ ಪರಿವರ್ತನೆಯಾಯಿತು. ಒಂದು ಬಕೆಟ್ ಬಿಸಿ ನೀರು ಕೊನೆಗೆ ಸದ್ದಿಲ್ಲದೆ ೫೦ ರೂ.ನಿಂದ ೧೦೦ ರೂ. ಗೆ ಏರಿದ್ದು ಭಕ್ತರ ಪಾಲಿಗೆ ಹೊರೆಯಾಗಿದೆ.
ಹಿಮಾಲಯದ ಯಾವುದೇ ಸ್ಥಳಕ್ಕೇ ಹೋದರೂ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ.ನಿಂದ ೧೦ ರೂ. ಇದೆ. ಈಗ ೨೦ ರೂ.ಗೆ ಏರಿಕೆಯಾಗಿದೆ ಎಂದು ೨೫ಕ್ಕೂ ಹೆಚ್ಚು ಬಾರಿ ಚಾರ್ ಧಾಮ್ ಹಿಮಾಲಯದ ಯಾತ್ರೆ ಮಾಡಿ ಬಂದಿರುವ ನಂಜನಗೂಡು ಶಾಸ್ತ್ರೀ (ಸುಬ್ರಹ್ಮಣ್ಯ ಶಾಸ್ತ್ರೀ) ಹೇಳಿದರು.
” ಕಪಿಲಾ ಸ್ನಾನಘಟ್ಟದ ಶೌಚಾಲಯ ಸ್ನಾನದ ಬಿಸಿ ನೀರು, ಬಟ್ಟೆ ಬದಲಿಸುವ ವ್ಯವಸ್ಥೆ ಎಲ್ಲವೂ ಉಚಿತವಾಗಿದ್ದು, ಬಿಸಿ ನೀರಿಗೆ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದ ತಕ್ಷಣ ಅದಕ್ಕೆ ತಡೆ ಹಾಕಲಾಗಿದೆ. ದೇವಾಲಯದಲ್ಲಿ ನಿತ್ಯ ಧ್ವನಿವರ್ಧಕದ ಪ್ರಕಟಣೆಯಲ್ಲಿ ಈ ಬಗ್ಗೆ ಪ್ರಚಾರ ಮಾಡುವಂತೆ ಇಂದಿನಿಂದಲೇ ಆದೇಶಿಸಲಾಗಿದೆ. ಅಲ್ಲಿ ಈ ಉಚಿತ ಸೌಲಭ್ಯದ ಕುರಿತಂತೆ ಫಲಕ ಅಳವಡಿಸಲು ಕೂಡ ತೀರ್ಮಾನಿಸಲಾಗಿದೆ. ಅಲ್ಲಿನ ಬಿಸಿ ನೀರಿಗೆ, ಶೌಚಾಲಯಕ್ಕೆ ಹಣ ಕೇಳಿದರೆ ನೇರವಾಗಿ ದೇವಾಲಯದ ಕಾರ್ಯಾಲಯಕ್ಕೆ ಬಂದು ತಿಳಿಸಬೇಕು.”
-ಸಿ.ಜಿ.ಕೃಷ್ಣ, ಇಒ, ಶ್ರೀಕಂಠೇಶ್ವರ ದೇವಾಲಯ
” ಕಪಿಲಾ ನದಿ ತೀರದಲ್ಲಿ ಬಿಸಿ ನೀರಿನ ದರ ಕಂಡು ನಮಗೆ ಆಘಾತವಾಯಿತು. ಪ್ರಶ್ನೆ ಮಾಡಲು ಹೋದರೆಜಗಳವಾಗುತ್ತದೆ. ನಾವು ಬಂದಿದ್ದು ದೇವಾಲಯಕ್ಕೆ ಎಂದು ಹಣ ನೀಡಿದೆವು. ಹಿಂದೆ ಕಾರ್ತಿಕ ಮಾಸದಲ್ಲಿ ಬಂದಾಗಲೂ ಬೇರೆಯವರಿದ್ದರು. ಆಗ ಒಂದು ಬಕೆಟ್ಗೆ ೧೦೦ ರೂ. ನೀಡಿದ್ದೆ. ಈ ಬಾರಿ ಪ್ರತಿ ಬಕೆಟ್ಗೆ ೫೦ ರೂ. ನೀಡಿ ಮಕ್ಕಳ ಸ್ನಾನ ಮಾಡಿಸಿ ಶ್ರೀಕಂಠೇಶ್ವರನ ದರ್ಶನಕ್ಕೆ ಹೋದೆವು.”
-ಜಗದಾಂಬಿಕೆ, ಶಾಂತಿ ನಗರ, ಬೆಂಗಳೂರು




