Mysore
22
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಹವಾಮಾನ ವೈಪರೀತ್ಯದಿಂದ ಕಂಗಾಲಾದ ರೈತ

 ನವೀನ್ ಡಿಸೋಜ

ಮೋಡಕವಿದ ವಾತಾವರಣ, ಬಿಸಿಲಿನ ಕೊರತೆಯಿಂದ ಸಂಕಷ್ಟ; ಆತಂಕದಲ್ಲೇ ಕೊಯ್ಲು ಪ್ರಕ್ರಿಯೆ ಪ್ರಾರಂಭ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮೋಡ ಕವಿದ ವಾತಾವರಣ ರೈತರನ್ನು ಚಿಂತೆಗೆ ದೂಡಿದೆ. ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದಿರುವ ಅನ್ನದಾತರು ಆತಂಕದ ನಡುವೆಯೇ ಕೊಯ್ಲು ಕಾರ್ಯ ನಡೆಸುತ್ತಿದ್ದಾರೆ.

ವರ್ಷಾರಂಭದಲ್ಲಿ ಬಿರು ಬಿಸಿಲು, ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಂತಹ ಸವಾಲುಗಳ ಮಧ್ಯೆ ಶ್ರಮವಹಿಸಿ ಬೆಳೆದಿದ್ದ ಕಾಫಿ, ಭತ್ತದ ಫಸಲು ಕೈಸೇರುವ ಹೊತ್ತಿನಲ್ಲಿ ಸಂಪೂರ್ಣವಾಗಿ ನೀರು ಪಾಲಾಗುತ್ತಿರುವ ಬಗ್ಗೆ ಚಿಂತಿಸ ತೊಡಗಿದ್ದಾರೆ. ಇತ್ತೀಚೆಗಷ್ಟೇ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಒಂದಿಷ್ಟು ನಷ್ಟ ಅನುಭವಿಸಿದ್ದ ಕೃಷಿಕರು ಈಗ ಮೋಡ ಕವಿದ ವಾತಾವರಣ ಅಥವಾ ಬಿಸಿಲಿನ ಕೊರತೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಜೂನ್ ತಿಂಗಳಿನಿಂದ ಕೃಷಿಗೆ ಪೂರಕವಾದಂಥ ವಾತಾವರಣ ನಿರ್ಮಾಣವಾಗಿದ್ದ ಕಾರಣದಿಂದ ರೈತರು ಉತ್ಸಾಹದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಿತ್ತನೆ, ಉಳುಮೆ, ನಾಟಿ ಕಾರ್ಯ ನಡೆದು ಇದೀಗ ಕೊಯ್ಲು ಹಂತದಲ್ಲಿ ಹವಾಮಾನ ವೈಪರೀತ್ಯ ರೈತರನ್ನು ಕಂಗಾಲಾಗಿಸಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತದ ಕೊಯ್ಲು ಕಾರ್ಯ ಮುಗಿದಿದ್ದು, ತೆನೆಗಳನ್ನು ಗದ್ದೆಗಳಲ್ಲೇ ಒಣಗಲು ಬಿಡಲಾಗಿದೆ. ಇನ್ನು ಜಿಲ್ಲೆಯ ಕೆಲವು ಭಾಗದಲ್ಲಿ ಸುಗ್ಗಿಹಬ್ಬ ಹುತ್ತರಿ ಕಳೆದ ನಂತರ ಕೊಯ್ಲು ಪ್ರಕ್ರಿಯೆ ಆರಂಭಿಸಿದ್ದಾರೆ.

ಈ ನಡುವೆ ಮಳೆಯಾದಲ್ಲಿ ಕೊಯ್ಲು ಮಾಡಿ ಗದ್ದೆಯಲ್ಲಿ ಉಳಿದಿರುವ ಮತ್ತು ಕೊಯ್ಲು ಮಾಡಲು ಉಳಿಸಿಕೊಂಡಿರುವ ಭತ್ತ ಎರಡಕ್ಕೂ ಸಮಸ್ಯೆಯುಂಟಾಗಲಿದೆ. ಗದ್ದೆಯಲ್ಲಿ ಒಣಗಲು ಬಿಟ್ಟಿರುವ ತೆನೆಗಳಿಂದ ಭತ್ತ ಉದುರಿ ಮಣ್ಣುಪಾಲಾದರೆ, ಕೊಯ್ಲು ಮಾಡಲು ಬಾಕಿ ಉಳಿದಿರುವ ಎತ್ತರದ ತೆನೆಗಳು ಗಾಳಿ ಹೊಡೆತಕ್ಕೆ ನೆಲಕ್ಕೆ ಬೀಳುವುದ ರಿಂದಲೂ ನಷ್ಟ ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಭತ್ತಕ್ಕೆ ಮಾತ್ರ ಹಾನಿ ಆಗುವುದಲ್ಲದೆ ಹುಲ್ಲಿನ ಗುಣಮಟ್ಟವು ಹಾಳಾಗುತ್ತದೆ. ದಿನವಿಡೀ ಮೋಡ ಮುಸುಕಿದ ವಾತಾವರಣ ಇರುವುದರಿಂದ ಬಿಸಿಲಿಲ್ಲದೆ ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿರುವ ಕಾಫಿ ಕರಗುತ್ತಿದೆ.

ಕೊಯ್ಲು ಮಾಡಲು ಗಿಡದಲ್ಲಿಯೇ ಉಳಿದಿರುವ ರೋಬಸ್ಟಾ ಕಾಫಿ ನೆಲಕ್ಕೆ ಉದುರುತ್ತಿದೆ. ಹಣ್ಣಾಗಿರುವ ಅರೇಬಿಕಾ, ರೋಬಸ್ಟಾ ಕಾಫಿ ಕೊಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಮಳೆ ಬಿದ್ದಿರುವುದು ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಕಾಫಿಗೆ ಕಾಯಿ ಕೊರಕ ಹುಳುವಿನ ಹಾವ ಳಿಯೂ ವಿಪರೀತವಾಗಿರುವುದರಿಂದ ಹಣ್ಣಾಗಿ ರುವ ಕಾಫಿಯನ್ನು ಬೇಗ ಕುಯ್ಲು ಮಾಡಿ ಮುಗಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಆದರೆ ಮಳೆ ಬರುವ ವಾತಾವರಣ ಇರುವಾಗ ಬೆಳೆಗಾರರು ಕಾಫಿ ಕೊಯ್ಲು ಮಾಡುವ ಧೈರ್ಯ ತೋರಿಸುವುದಿಲ್ಲ. ಹಾಗಾಗಿ ಕಾಫಿ ಹಣ್ಣು ಗಿಡದಲ್ಲಿ ಉಳಿದುಕೊಂಡರೆ ರೋಗಕ್ಕೆ ತುತ್ತಾ ಗುವ ಸಾಧ್ಯತೆ ಹೆಚ್ಚು . ಇದರಿಂದ ಕಾಫಿಯ ಗುಣಮಟ್ಟದ ಮೇಲೂ ಪರಿಣಾಮ ಬೀಳಲಿದೆ.

ಮೋಡಕವಿದ ವಾತಾವರಣ, ಬಿಸಿಲಿನ ಕೊರತೆಯಿಂದ ಸಂಕಷ್ಟ; ಆತಂಕದಲ್ಲೇ ಕೊಯ್ಲು ಪ್ರಕ್ರಿಯೆ ಪ್ರಾರಂಭ ಕೊಡಗಿನಲ್ಲಿ ಭತ್ತದ ಕೊಯ್ಲು ಚಟುವಟಿಕೆಯಲ್ಲಿ ತೊಡಗಿರುವ ಕಾರ್ಮಿಕರು. ಕೊಯ್ಲು ಮಾಡಿದ ಭತ್ತದ ಬೆಳೆ ಒಣಗಲು ಬಿಟ್ಟಿರುವುದು. ಕಿಬ್ಬೆಟ್ಟ ಗ್ರಾಮದ ಚೇತನ್ ಅವರ ಮನೆಯಂಗಳದಲ್ಲಿ ಹಾಕಿರುವ ಕಾಫಿಗೆ ಮಳೆ ಭೀತಿಯಿಂದ ಟಾರ್ಪಲ್ ಮುಚ್ಚಿರುವುದನ್ನು ಕಾಣಬಹುದು.

” ಕೊಡಗು ಜಿಲ್ಲೆಯಾದ್ಯಂತಹ ಕಾಯಿಕೊರಕ (ಬರ್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿದೆ. ಇದರಿಂದ ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಇಳುವರಿಯಲ್ಲಿ ಕುಂಠಿತವಾಗುತ್ತಿರುವುದು ಕಂಡುಬಂದಿದೆ. ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆ ಇರುವುದರಿಂದ ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕುಯ್ಯದೆ ಉಳಿದುಕೊಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು ನಾಶಪಡಿಸಬೇಕು.”

-ಡಾ.ವೀರೇಂದ್ರ ಕುಮಾರ್,

” ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಅವಧಿಗೆ ತಕ್ಕಂತೆ ಬೆಳೆ ಕಟಾವು ಮಾಡಬೇಕು. ಆದರೆ ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ತುಂತುರು ಮಳೆಯಾಗುತ್ತಿದೆ. ಆದ್ದರಿಂದ ಮಳೆ ಭಯದಲ್ಲೇ ಭತ್ತದ ಬೆಳೆ ಕಟಾವು ಮಾಡುತ್ತಿದ್ದೇವೆ. ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿದ ಕಾಫಿ ಒಣಗಿಸಲೂ ಸಮಸ್ಯೆಯಾಗುತ್ತಿದೆ. ಹೆಚ್ಚು ಕೊಯ್ಲು ಮಾಡಿದರೆ ಕೊಳೆತುಹೋಗುವ ಭೀತಿ ಎದುರಾಗಿದೆ.”

-ಶರಣ್ ಗೌಡ, ಕೃಷಿಕ, ಹರಗ ಗ್ರಾಮ, ಸೋಮವಾರಪೇಟೆ

Tags:
error: Content is protected !!