Mysore
25
clear sky

Social Media

ಶನಿವಾರ, 21 ಮಾರ್ಚ್ 2026
Light
Dark

ಕೇರಳಕ್ಕೆ ನೂರಾರು ಟಿಪ್ಪರ್‌ಗಳಲ್ಲಿ ರಾಜ್ಯದ ಸಂಪತ್ತು ಸಾಗಣೆ

ಮಹೇಂದ್ರ ಹಸಗೂಲಿ

ಕಡಿವಾಣ ಹಾಕದಿದ್ದರೆ ರೈತಸಂಘ, ಕನ್ನಡಪರ ಸಂಘಟನೆಗಳು, ಜನಸಾಮಾನ್ಯರಿಂದ ಉಗ್ರ ಹೋರಾಟದ ಎಚ್ಚರಿಕೆ 

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಕೇರಳ ನೋಂದಣಿಯ ಟಿಪ್ಪರ್‌ಗಳ ಸಂಚಾರ ಹೆಚ್ಚಿದ್ದು ಗಣಿಗಾರಿಕೆಯಲ್ಲಿ ಕೇರಳಿಗರ ಹಸ್ತಕ್ಷೇಪ ಹೆಚ್ಚಾಗುವ ಜತೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ರಾಜಾರೋಷವಾಗಿ ಗುಂಡ್ಲುಪೇಟೆಯಿಂದ ಬಿಳಿಕಲ್ಲು, ಕರಿಕಲ್ಲು, ಕೆಂಪುಮಣ್ಣು ಸಾಗಣೆಯಾಗುತ್ತಿದ್ದರೂ ಗಣಿ ಇಲಾಖೆ, ಆರ್‌ಟಿಒ, ಪೊಲೀಸ್ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ ಎಂಬ ಆರೋಪ ಕೇಳಿಬರುತ್ತಿದೆ.

ತಾಲ್ಲೂಕಿನ ಕೂತನೂರು ಗುಡ್ಡ, ಹಿರಿಕಾಟಿ, ರಂಗೂಪುರ, ಅರೇಪುರ, ತೆರಕಣಾಂಬಿ, ಮಡಹಳ್ಳಿ ಸುತ್ತಮುತ್ತ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕೇರಳ ಮೂಲದ ೧೮, ೨೦ ಚಕ್ರಗಳ ಟಿಪ್ಪರ್, ಕಂಟೇನರ್‌ನಂತಹ ವಾಹನಗಳ ಸಂಚಾರದಿಂದ ತಾಲ್ಲೂಕಿನ ಸ್ಥಳೀಯ ಟಿಪ್ಪರ್ ಮಾಲೀಕರಿಗೆ ಅವಕಾಶವಿಲ್ಲವಾಗಿದೆ. ಚಿಕ್ಕ ಟಿಪ್ಪರ್‌ನಲ್ಲಿ ಮೂರು ಬಾರಿ ಸಂಚರಿಸುವ ಬದಲು ಒಮ್ಮೆ ಇಪ್ಪತ್ತು ಚಕ್ರಗಳ ಲಾರಿಯಲ್ಲಿ ಸಾಗಿಸಬಹುದು ಎಂಬ ದುರಾಸೆ ಗಣಿ ಮಾಲೀಕರಲ್ಲಿ ತುಂಬಿದೆ ಎಂಬುದು ಸಾರ್ವಜನಿಕರ ಆರೋಪ.

ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಎಷ್ಟು ಪ್ರಮಾಣದಲ್ಲಿ ರಾಜಧನ ಕಟ್ಟುತ್ತಾರೆ? ಎಷ್ಟು ವಂಚಿಸುತ್ತಿದ್ದಾರೆ? ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಗಣಿ ಇಲಾಖೆ ಕ್ರಮ ವಹಿಸದೆ ಮೌನವಾಗಿದೆ ಎನ್ನುವುದು ಹಲವರ ಆರೋಪ.

ರಾಜಾರೋಷವಾಗಿ ಕೇರಳಕ್ಕೆ ಕಂಟೇನರ್, ಟಿಪ್ಪರ್‌ಗಳಲ್ಲಿ ಕಲ್ಲು, ಮಣ್ಣು ಸಾಗಣೆಯಾಗುವುದರ ಹಿಂದೆ ಕೇರಳ ರಾಜಕಾರಣಿಗಳ ಕೈವಾಡವಿರಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ತಾಲ್ಲೂಕಿನಿಂದ ಕಲ್ಲು, ಮಣ್ಣು ಸಾಗಣೆ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದ್ದಾರೆ.

”  ಗಣಿಗಾರಿಕೆಯಿಂದ ಬೆಟ್ಟಗುಡ್ಡ ಸಂಪೂರ್ಣ ನಾಶವಾಗುತ್ತಿದ್ದು, ನಮ್ಮ ರಾಜ್ಯದ ಸಂಪತ್ತನ್ನು ರಕ್ಷಿಸಿಕೊಳ್ಳುವ ಹಕ್ಕು ನಮ್ಮೆಲ್ಲರ ಮೇಲಿದೆ. ಜನರೇ ರೊಚ್ಚಿಗೆದ್ದು ಅಕ್ರಮ ದಂಧೆಕೋರರಿಗೆ ಬುದ್ಧಿ ಕಲಿಸಬೇಕಿದೆ. ಕೇರಳಕ್ಕೆ ನಮ್ಮ ಸಂಪತ್ತು ಲೂಟಿಯಾಗುತ್ತಿದ್ದು, ನಮ್ಮವರೇ ಕೇರಳದವರೊಡನೆ ಶಾಮೀಲಾಗಿ ಮಾರಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಶೀಘ್ರವೇ ಉಗ್ರ ಹೋರಾಟ ಕೈಗೊಳ್ಳಲಾಗುವುದು.”

-ಹೊನ್ನೂರು ಪ್ರಕಾಶ್, ರೈತ ಮುಖಂಡ 

” ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಕ್ರಮವಾಗಿ ಹಾಗೂ ದಾಖಲಾತಿ ಇಲ್ಲದೆ ಓವರ್ ಲೋಡ್ ಹಾಗೂ ವ್ಯಾಪ್ತಿಗೆ ಒಳಪಡದ ರಸ್ತೆಯಲ್ಲಿ ಸಂಚರಿಸಿದರೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು.”

ಶ್ರೀರೂಪ, ಜಿಲ್ಲಾಧಿಕಾರಿ

” ಗುಂಡ್ಲುಪೇಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆದರೆ ಇದಕ್ಕೆ ಕಡಿವಾಣ ಬೀಳಲಿದೆ. ಆದರೂ ಈ ವಿಚಾರದಲ್ಲಿ ಆರ್‌ಟಿಇಒ, ಗಣಿ, ಭೂ ವಿಜ್ಞಾನ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ನಾವು ನಂಬರ್‌ಪ್ಲೇಟ್ ಇಲ್ಲದಿದ್ದರೆ ಹಾಗೂ ಅತಿ ವೇಗದ ಚಾಲನೆ ಮಾಡಿದರೆ ಮಾತ್ರ ಕ್ರಮ ಕೈಗೊಳ್ಳಬಹುದು.”

ಮುತ್ತುರಾಜ್, ಡಿವೈಎಸ್‌ಪಿ

 

 

Tags:
error: Content is protected !!