Mysore
22
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ವಿಶೇಷ ಕಾರ್ಯಕ್ರಮಗಳು

ಪ್ರಸಕ್ತ ಸಾಲಿನಲ್ಲಿ ಹುಣಸೂರು ತಾಲ್ಲೂಕಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನದ ಗುರಿ

ದಾ. ರಾ. ಮಹೇಶ್

ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕಿ ನಲ್ಲಿ ಎಸ್‌ಎಸ್‌ಎಲ್‌ಸಿ -ಲಿತಾಂಶ ಉತ್ತಮ ಪಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಾರ್ಚ್ ೨೧ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲ್ಲೂಕಿನಿಂದ ೪,೧೮೯ ವಿದ್ಯಾರ್ಥಿಗಳು ನೋಂದಣಿಯಾಗಿ ದ್ದಾರೆ. ಕಳೆದ ಸಾಲಿನಲ್ಲಿ ಶೇ. ೮೩. ೨೫ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷವೂ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಶೇ. ೬೦ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಒಬ್ಬರಂತೆ ದತ್ತು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಿಂಗಳ ೩ನೇ ಶನಿವಾರ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರ ಸಭೆ ನಡೆಸಿ, ಕ್ಲಿಷ್ಟಕರ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಸ ಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳನ್ನು ಗುರುತಿಸಿ ಉತ್ತೀರ್ಣರಾಗುವಂತೆ ಕ್ರಿಯಾಯೋಜನೆ ರೂಪಿಸಲಾಗಿದೆ. ಅಲ್ಲದೆ, ನಿಯಮಿತವಾಗಿ ಪೋಷಕರ ಸಭೆ ನಡೆಸಲಾಗುತ್ತಿದೆ.

ಪೂರ್ವಸಿದ್ಧತಾ ಪರೀಕ್ಷೆಯ ವಿಶ್ಲೇಷಣೆಯ ನಂತರ ತೀರಾ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಪಾಸಿಂಗ್ ಪ್ಯಾಕೇಜ್’, ಸರಾಸರಿ ಮತ್ತು ಸರಾಸರಿಗಿಂತ ಹೆಚ್ಚಿನ ಅಂಕ ಗಳಿಕೆಯ ಮಕ್ಕಳಿಗೆ ‘ಸ್ಕೋರಿಂಗ್ ಪ್ಯಾಕೇಜ್’ ರೂಪಿಸಿರುವುದು ಶಿಕ್ಷಣ ಇಲಾಖೆ ಹಮ್ಮಿಕೊಂಡ ಕೆಲವು ಪ್ರಮುಖ ಕಾರ್ಯಕ್ರಮಗಳು.

ಬೆಳಿಗ್ಗೆ ೯ರಿಂದ ೧೦ರವರೆಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದೇವೆ. ಸಂಜೆಯೂ ಶಾಲಾ ಅವಧಿಯ ನಂತರ ಗುಂಪು ಅಧ್ಯಯನ ಮಾಡಿಸುತ್ತಿದ್ದೇವೆ. ರಸಪ್ರಶ್ನೆ, ಯೂನಿಟ್ ಟೆಸ್ಟ್ ಗಳನ್ನೂ ನಿಯಮಿತವಾಗಿ ನಡೆಸಿದ್ದೇವೆ. ಅಂಕಗಳನ್ನು ಗಳಿಸಿರುವುದರ ಆಧಾರದ ಮೇಲೆ ೨ ವಿಭಾಗಗಳನ್ನು ಮಾಡಿದ್ದೇವೆ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ‘ಪಾಸಿಂಗ್ ಪ್ಯಾಕೇಜ್’ ಅಂದರೆ ಶೇ. ೩೦ರಷ್ಟಾದರೂ ಅಂಕ ಗಳಿಸ ಬಹುದಾದ ಮಾದರಿಯನ್ನು ಇಟ್ಟುಕೊಂಡು ನಿರಂತರವಾಗಿ ಕಲಿಸುತ್ತಿದ್ದೇವೆ. ಈ ವರ್ಷ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಎಲ್ಲ ವಿಷಯ ಗಳಲ್ಲಿ ಅನುತ್ತೀರ್ಣರಾದ ೭ ಮಕ್ಕಳು ಇದ್ದಾರೆ. ಅವರು ಓದುವಂತೆ ಮಾಡಲು ಗರಿಷ್ಟ ಪ್ರಯತ್ನ ನಡೆಸಿದ್ದೇವೆ ಎಂದು ಹನಗೋಡು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಂತೋಷ್ ಪತ್ರಿಕೆಗೆ ತಿಳಿಸಿದರು.

ಪಾಲಕರ ಸಭೆಗೆ ಹೆಚ್ಚಿನ ಪೋಷಕರು ಬರುವುದಿಲ್ಲವಾದ್ದರಿಂದ ನಾವೇ ಮನೆಮನೆಗೆ ಹೋಗಿ, ಮಕ್ಕಳನ್ನು ಟಿವಿ ಹಾಗೂ ಮೊಬೈಲ್ ಗಳಿಂದ ದೂರ ಇರಿಸುವಂತೆ ಮನವರಿಕೆ ಮಾಡಿದ್ದೇವೆ. ಮಕ್ಕಳು ಮನೆಯಲ್ಲಿರುವಾಗ ಪಾಲಕರೂ ಟಿವಿ, ಮೊಬೈಲ್ ಬಳಸದಂತೆಯೂ ಸಲಹೆ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲ್ಲೂಕು ೫ನೇ ಸ್ಥಾನ ಪಡೆದಿತ್ತು. ಈ ವರ್ಷ ಪರೀಕ್ಷಾಪೂರ್ವ ತರಬೇತಿ ಕಾರ್ಯಕ್ರಮಗಳು ಚೆನ್ನಾಗಿ ನಡೆದಿವೆ. ಜಿಲ್ಲೆಯಲ್ಲಿ ೫ರೊಳಗಿನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರಿ ಶಾಲೆ ಸೇರಿದಂತೆ ಖಾಸಗಿ ಶಾಲೆಗಳಿಗೂ ಪರೀಕ್ಷಾ ಸಿದ್ಧತೆಯ ಕೈಪಿಡಿಯನ್ನು ಸ್ವಂತ ಖರ್ಚಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಂಚಿದ್ದೇನೆ. ಮುಖ್ಯಶಿಕ್ಷಕರ ಸಭೆ ಕರೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಡೆಸಿರುವ ಪೂರ್ವ ತಯಾರಿಯ ಮಾಹಿತಿ ಪಡೆದಿದ್ದೇನೆ. ಶಿಕ್ಷಕರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇದೆ. -ಜಿ. ಡಿ. ಹರೀಶ್ ಗೌಡ, ಶಾಸಕ

ಪ್ರತಿ ಶಾಲೆಯಲ್ಲೂ ‘ಪರೀಕ್ಷೆ ಒಂದು ಹಬ್ಬ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪರೀಕ್ಷೆಯ ಭಯ ಹೋಗಲಾಡಿಸಲಾಗುತ್ತಿದೆ. ಉತ್ಸಾಹ ತುಂಬುವ, ಉತ್ತೇಜನ ನೀಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ೩ರಿಂದ ೪ ಬಾರಿ ವಿದ್ಯಾರ್ಥಿಗಳ ತಂದೆ- ತಾಯಿಯರೊಂದಿಗೆ ಸಭೆ ನಡೆಸಲಾಗಿದೆ. ಕಳೆದ ಬಾರಿ ಫಲಿತಾಂಶದಲ್ಲಿ ಹುಣಸೂರು ತಾಲ್ಲೂಕು ಜಿಲ್ಲೆಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಪ್ರಥಮ ಸ್ಥಾನ ಪಡೆಯಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. –ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ

 

Tags:
error: Content is protected !!