ಪುನೀತ್ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ೩೩೧, ೪ ವರ್ಷಗಳಲ್ಲಿ ಒಟ್ಟು ೭೯೦ ಹಾವು ಕಡಿತ ಪ್ರಕರಣ ದಾಖಲು
ಮಡಿಕೇರಿ: ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದ್ದು, ಕಳೆದ ವರ್ಷ ಬರೋಬ್ಬರಿ ೩೩೧ ಹಾವು ಕಡಿತ ಪ್ರಕರಣಗಳು ದಾಖಲಾಗಿವೆ.
ಕಳೆದ ೪ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಒಟ್ಟು ೭೯೦ ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದವರಿಗೆ ಸ್ಥಳೀಯ ಆಸ್ಪತ್ರೆಗಳು ಮತ್ತು ಮಡಿಕೇರಿ ಜಿಲ್ಲಾಸ್ಪತ್ರೆ(ಕೋಯಿಮ್ಸ್)ಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ.
೨೦೨೧ರಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೬೩ ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ೨೦೨೪ರಲ್ಲಿ ಈ ಸಂಖ್ಯೆ ೩೩೧ಕ್ಕೆ ಏರಿಕೆಯಾಗಿದೆ. ಅರಣ್ಯ ನಾಶ ಮುಂತಾದ ಕಾರಣಗಳಿಂದ ಹಾವುಗಳು ತೋಟ ಮತ್ತು ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು ೯೯ ಪ್ರಕರಣಗಳು ದಾಖಲಾಗಿದ್ದು, ವರ್ಷಾಂತ್ಯದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಬಹುತೇಕ ಪ್ರಕರಣಗಳಲ್ಲಿ ಹಾವು ಕಡಿತ ಕ್ಕೊಳಗಾದವರು ತಕ್ಷಣ ಆಸ್ಪತ್ರೆಗೆ ತಲುಪುತ್ತಿರುವುದರಿಂದ ಮತ್ತು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿರುವುದರಿಂದ ಹಾವು ಕಡಿತದಿಂದ ಉಂಟಾಗಬಹುದಾದ ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹೆಚ್ಚಾಗಿ ವಿಷ ರಹಿತ ಹಾವು ಕಡಿತ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿರು ವುದಾಗಿ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ನಡೆಯುವ ಸಂದರ್ಭದಲ್ಲಿ ಹೆಚ್ಚು ಹಾವು ಕಡಿತ ಪ್ರಕರಣಗಳು ಸಂಭವಿಸುತ್ತಿದ್ದು, ಕಡಿತಕ್ಕೊಳಗಾದವರಲ್ಲಿ ಶೇ.೯೦ ತೋಟ ಕಾರ್ಮಿಕರೇ ಆಗಿರುತ್ತಾರೆ. ಕಾಫಿ ಕೊಯ್ಲು ಸೇರಿದಂತೆ ತೋಟಗಳಲ್ಲಿ ಕೆಲಸ ಮಾಡುವ ಸಮಯ ಬಿಟ್ಟರೆ ಉಳಿದ ಸಮಯದಲ್ಲಿ ಕಾರ್ಮಿಕರು ತೋಟಗಳಿಗೆ ಹೋಗುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ಮಾತ್ರ ಹಾವು ಕಡಿತ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ.
ದಾಖಲಾಗುವ ಪ್ರಕರಣಗಳ ಪೈಕಿ ಬೆಕ್ಕಿನ ಹಾವು(ಕ್ಯಾಟ್ ಸ್ನೇಕ್), ಮರ ಹಾವು(ಬ್ರಾನ್ಸ್ ಬ್ಯಾಕ್ ಟ್ರೀ ಸ್ನೇಕ್), ಹಸಿರು ಹಾವು(ಗ್ರೀನ್ ವೈನ್ ಸ್ನೇಕ್), ಮುಸುರ ಹಾವು(ಇಂಡಿಯನ್ ಟ್ರಿಂಕೆಟ್ ಸ್ನೇಕ್)ಗಳ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಈ ಹಾವುಗಳು ವಿಷ ರಹಿತ ಮತ್ತು ಅಲ್ಪಪ್ರಮಾಣದ ವಿಷ(ಮಾನವ ಪ್ರಾಣ ಹಾನಿ ಅಪಾಯವಿಲ್ಲದ)ಹೊಂದಿರುವ ಹಾವುಗಳಾಗಿವೆ. ಉಳಿದಂತೆ ಕಟ್ಟಾವು(ಕಾಮನ್ ಕ್ರೈಟ್), ನಾಗರ ಹಾವು ಮತ್ತು ಮಂಡಲ ಹಾವು(ರಸಲ್ಸ್ ವೈಪರ್), ಮಲಬಾರ್ ಪಿಟ್ ವೈಪರ್ ಹಾವುಗಳು ಅಪಾಯಕಾರಿ ಹಾವುಗಳಾಗಿದ್ದು, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಹಾವಿನ ಬಗ್ಗೆ ಇರಲಿ ಎಚ್ಚರ..!:
ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಸಮಯದಲ್ಲಿ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೊಡಗಿನಲ್ಲಿ ಕಾಣಿಸಿಕೊಳ್ಳುವ ಬಹುತೇಕ ಹಾವುಗಳು ವಿಷರಹಿತವಾಗಿದ್ದರೂ, ವಿಷಕಾರಿ ಹಾವುಗಳೂ ಮನೆ ಸೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹಾವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೊಟ್ಟಿಗೆ, ಸೌದೆ ಇಟ್ಟಿರುವ ಸ್ಥಳ, ಸ್ಟೋರ್ ರೂಮ್, ಚಪ್ಪಲಿ, ಶೂಗಳನ್ನು ಬಿಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ.
ಯಾವ ವರ್ಷ ಎಷ್ಟೆಷ್ಟು ಪ್ರಕರಣ?: ೨೦೨೧ರಲ್ಲಿ ೬೩ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ೨೦೨೨ರಲ್ಲಿ ೧೩೪ ಪ್ರಕರಣಗಳು ದಾಖಲಾಗಿದ್ದು, ೧ ಸಾವು ಸಂಭವಿಸಿದೆ. ೨೦೨೩ರಲ್ಲಿ ೧೬೩ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ೨೦೨೪ರಲ್ಲಿ ೩೩೧ ಪ್ರಕರಣಗಳು ದಾಖಲಾಗಿದ್ದು, ೧ ಸಾವು ಸಂಭವಿಸಿದೆ. ಒಟ್ಟು ೭೯೦ ಪ್ರಕರಣಗಳು ದಾಖಲಾಗಿದ್ದು, ೨ ಸಾವು ಸಂಭವಿಸಿವೆ.
” ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ನಡೆಯುವ ಸಂದರ್ಭದಲ್ಲಿ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗುತ್ತವೆ. ಎಲ್ಲೇ ಪ್ರಕರಣ ನಡೆದರೂ ನೇರವಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಇಲ್ಲಿ ಔಷಧಿ ಲಭ್ಯವಿರುವ ಜತೆಗೆ, ಐಸಿಯು, ವೆಂಟಿಲೇಟರ್, ಅಗತ್ಯವಿದ್ದರೆ ಡಯಾಲಿಸಿಸ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿರುವ ಹಿನ್ನೆಲೆಯಲ್ಲಿ ಪ್ರಕರಣಗಳಲ್ಲಿ ಸಾವು ಸಂಭವಿಸುವ ಪ್ರಮಾಣ ಕಡಿಮೆಯಿದೆ. ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅರಣ್ಯ ನಾಶ ಕಾರಣವಾಗಿರಬಹುದು.”
-ಡಾ.ನಂಜುಂಡಯ್ಯ, ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಮಡಿಕೇರಿ





