ಚಿರಂಜೀವಿ ಸಿ.ಹುಲ್ಲಹಳ್ಳಿ
ಜಂಬೂಸವಾರಿಯಲ್ಲಿ ೫೯ ಸ್ತಬ್ಧಚಿತ್ರಗಳ ಮೆರವಣಿಗೆ; ೨೦ಕ್ಕೂ ಹೆಚ್ಚು ಟ್ಯಾಬ್ಲೋಗಳಲ್ಲಿ ಗಾಂಧೀಜಿ ಜೀವನ ಅನಾವರಣ
ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿದ ೫೯ ಸ್ತಬ್ಧಚಿತ್ರಗಳು ಲಕ್ಷಾಂತರ ಮಂದಿಯ ಕಣ್ಮನ ಸೆಳೆದವು. ಗಾಂಧೀ ಜಯಂತಿಯ ದಿನದಂದೇ ವಿಜಯದಶಮಿ ಹಬ್ಬವೂ ಬಂದ ಹಿನ್ನೆಲೆಯಲ್ಲಿ ೨೦ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಗಾಂಧೀಜಿ ತತ್ವ, ಸಿದ್ಧಾಂತ, ಹೋರಾಟದ ಬದುಕಿನ ಕುರಿತು ಬೆಳಕು ಚೆಲ್ಲಿದವು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ‘ಶಕ್ತಿ’ ಯೋಜನೆಯ ಯಶೋಗಾಥೆ ಕುರಿತ ಸ್ತಬ್ಧಚಿತ್ರದೊಂದಿಗೆ ಪ್ರಾರಂಭವಾದ ಮೆರವಣಿಗೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ವಿಜಯದ ರನ್ವೇ ಸ್ತಬ್ಧಚಿತ್ರವು ಎಲ್ಲರ ಗಮನ ಸೆಳೆಯಿತು.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ನಿಂದ ಆತ್ಮನಿರ್ಭರ ಭಾರತದ ಮುನ್ನಡೆ, ರಕ್ಷಣಾ ಚಲನಶೀಲತೆ, ಭಾರತೀಯ ರೈಲ್ವೆ ಇಲಾಖೆಯ ಚಿನಾಬ್ ಸೇತು ಹಾಗೂ ಪಂಬನ್ ಸೇತು, ಮಂಡ್ಯ ಜಿಲ್ಲೆಯ ‘ಸ್ವಾತಂತ್ರ್ಯ ಹೋರಾಟದ ದೀಪ-ಶಿವಪುರದ ಧ್ವಜ ಸತ್ಯಾಗ್ರಹ’, ಚಿಕ್ಕಬಳ್ಳಾಪುರ ಜಿಲ್ಲೆಯ ಜ್ಞಾನಿ-ವಿಜ್ಞಾನಿಗಳ ನಾಡು ಸ್ತಬ್ಧಚಿತ್ರ, ಮೈಸೂರು ಮಹಾನಗರ ಪಾಲಿಕೆಯ ಸ್ವಸ್ಥ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಕುರಿತ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ತಂದವು.
ಮೈಸೂರು ಜಿಲ್ಲೆಯ ಬದನವಾಳು ನೂಲುವ ಕೇಂದ್ರ, ಕಾವೇರಿ ನೀರಾವರಿ ನಿಗಮದಿಂದ ನಾಡಿನ ಜೀವ ನದಿಗಳಿಂದ ಸಮೃದ್ಧವಾದ ಕರುನಾಡು, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದಿಂದ ಕರ್ನಾಟಕದ ಹೆಮ್ಮೆಯ ಸಂಕೇತ ಮೈಸೂರು ರೇಷ್ಮೆ, ಬೆಂಗಳೂರು ನಗರ ಜಿಲ್ಲೆಯಿಂದ ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ, ಚಾಮರಾಜನಗರ ಜಿಲ್ಲೆಯ ಪ್ರಕೃತಿಯ ಸೌರ್ಹಾದತೆಯೊಂದಿಗೆ ಪ್ರಗತಿಯತ್ತ ಸಾಗೋಣ, ಕೊಡಗು ಜಿಲ್ಲೆಯ ಕೊಡಗಿನ ಚಾರಣ ಪಥಗಳು ಸಾರ್ವಜನಿಕರನ್ನು ಆಕರ್ಷಿಸಿದವು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಅಭೂತಪೂರ್ವ ಸಾಧನ, ತುಮಕೂರು ಜಿಲ್ಲೆಯಿಂದ ‘ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ ನಮ್ಮ ತುಮಕೂರು ಜಿಲ್ಲೆ’, ಉಡುಪಿ ಜಿಲ್ಲೆಯಿಂದ ಸ್ವಚ್ಛ ಉಡುಪಿ, ರಾಜೀವ್ ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ- ಕರ್ನಾಟಕದಿಂದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನ, ಕರ್ನಾಟಕ ಹಾಲು ಮಹಾಮಂಡಳಿ ನಿ. (ಕೆಎಂಎಫ್)ದಿಂದ ನಂದಿನಿ ಹಾಲಿನ ಶುಭ್ರತೆ… ನೀಡಿದೆ ರೈತ ಪರಿವಾರಕ್ಕೆ ಭದ್ರತೆ, ಹೈನೋದ್ಯಮದ ಮೂಲಕ ಮಹಿಳಾ ಸಬಲೀಕರಣ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟರ ಸಮಗ್ರ ಅಭಿವೃದ್ಧಿ -ನಮ್ಮ ಧ್ಯೇಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲಾಖಾ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದವು.





