ಹೇಮಂತ್ ಕುಮಾರ್
ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ
ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ ಕ್ಷೇತ್ರದಲ್ಲಿದೆ. ಅದನ್ನು ಹೊರತುಪಡಿಸಿದರೆ ದಕ್ಷಿಣದಲ್ಲಿರುವ ಏಕೈಕ ದೇವಾಲಯ ಸಾತನೂರಿನಲ್ಲಿರುವುದು ಬಹುತೇಕರಿಗೆ ತಿಳಿದಿಲ್ಲ.
ಈ ದೇವಾಲಯದ ವಿಶೇಷವೆಂದರೆ ಮುಂಭಾಗ ಸಾರ್ವಜನಿಕ ಸ್ಮಶಾನ, ಪಕ್ಕದಲ್ಲೇ ಹರಿಯುವ ಕಾವೇರಿ ತೊರೆ, ಮಧ್ಯ ಅಶ್ವತ್ಥ ವೃಕ್ಷವಿದೆ. ಇಂತಹ ಪ್ರಶಾಂತವಾದ ಸ್ಥಳದಲ್ಲಿರುವ ಶ್ರೀ ಶಂಭುಲಿಂಗೇಶ್ವರಸ್ವಾಮಿಯ ದೇವಾಲಯ ಇದೀಗ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಮಹೋತ್ಸವಕ್ಕೆ ಸಿದ್ಧಗೊಂಡಿದೆ.
ಗ್ರಾಮದ ಸ್ಮಶಾನದ ಆವರಣದಲ್ಲಿ ಶಿಥಿಲಗೊಂಡಿದ್ದ ಪುರಾತನವಾದ ಶ್ರೀ ಶಂಭುಲಿಂಗೇಶ್ವರ ದೇವಾಲಯವನ್ನು ನೆಲಸಮಗೊಳಿಸಿ, ನೂತನವಾಗಿ ಸುಮಾರು ೧ ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ವಾಸ್ತುಶಿಲ್ಪ ಶಾಸ್ತ್ರ ಪ್ರಕಾರ ಶಿಲಾಮಯವಾಗಿ ನಿರ್ಮಾಣಗೊಳಿಸಿದ್ದಾರೆ.
ಈ ದೇವರ ಒಕ್ಕಲಿನವರು, ಭಕ್ತಾದಿಗಳು ವಿವಿಧೆಡೆ ನೆಲೆಸಿದ್ದಾರೆ. ಪ್ರತಿ ವರ್ಷ ದೀಪಾವಳಿ ಹಾಗೂ ಶಿವರಾತ್ರಿ ಹಬ್ಬದಂದು ಕುಟುಂಬ ಸಮೇತರಾಗಿ ಆಗಮಿಸಿ, ವಸ್ತ್ರ, ಬೆಲ್ಲ, ಅಕ್ಕಿ ಸೇರಿದಂತೆ ಪಡಿ ಅರ್ಪಿಸಿ ದೇವರ ದರ್ಶನ ಪಡೆಯುವುದು ಇಲ್ಲಿನ ವಾಡಿಕೆ. ಈಗ ಅವರೆಲ್ಲರ ಸಹಕಾರ ಪಡೆದು ಶ್ರೀ ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ನೂತನ ದೇವಾಲಯ ನಿರ್ಮಿಸಿ, ಇದೀಗ ಲೋಕಾರ್ಪಣೆಗೆ ಸಿದ್ಧಗೊಳಿಸಿದೆ.
ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಮಹೋತ್ಸವ ಫೆ.೫ ಮತ್ತು ೬ರಂದು ವಿಜೃಂಭಣೆಯಿಂದ ನಡೆಸಲು ಗ್ರಾಮಸ್ಥರು ಸಜ್ಜಾಗಿದ್ದು, ಫೆ.೫ರ ಗುರುವಾರ ಸಂಜೆ ೫.೩೦ಕ್ಕೆ ಚುಂಚಶ್ರೀ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ಹಾಗೂ ವಿಶ್ವಮಾನವ ಕ್ಷೇತ್ರದ ಡಾ.ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕುಂಭಾಭಿಷೇಕ ನೆರವೇರಲಿದೆ.
ಫೆ.೬ರ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸುವರು. ಜಾ.ದಳ ಮುಖಂಡ ಬಿ.ಆರ್.ರಾಮಚಂದ್ರು ಅಧ್ಯಕ್ಷತೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ, ಮಾಜಿ ಶಾಸಕ ಎಂ.ಶ್ರೀನಿವಾಸ್, ಎಂ.ಎಸ್. ಆತ್ಮಾನಂದ, ಜಾ.ದಳ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಶ್ರೀ ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ತಿಳಿಸಿದೆ.





