೫೦ ಜೆಸಿಬಿ, ೩೦ ಟಿಪ್ಪರ್ಗಳು, ೮ ಟ್ರಾಕ್ಟರ್ಗಳು, ೫೦೦ ಮಂದಿ ಪೌರಕಾರ್ಮಿಕರು ಭಾಗಿ
ಮೈಸೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆಮ ಕೊರತೆ ಎದ್ದು ಕಾಣುತ್ತಿತ್ತು. ಅದನ್ನು ಶುಚಿಗೊಳಿಸಲು ಸ್ವಚ್ಛತಾ ಕಾರ್ಯಕ್ರಮ ಎಂಬ ವಿನೂತನ ಪ್ರಯೋಗ ಮಾಡಲಾಗಿದ್ದು, ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ನಗರದ ದೊಡ್ಡಕೆರೆ ಮೈದಾನದಲ್ಲಿ ಮೈಸೂರು ಮಹಾನಗರಪಾಲಿಕೆ ಹಾಗೂ ಬೋಗಾದಿ, ಶ್ರೀರಾಂಪುರ, ಹೂಟಗಳ್ಳಿ, ಕಡಕೊಳ, ಸಿದ್ದಲಿಂಗಪುರ ಪಟ್ಟಣ ಪಂಚಾಯಿತಿ, ನಗರಸಭೆ, ಸ್ಥಳೀಯ ಸಂಸ್ಥೆಗಳು ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಹೊರ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ಸುರಿದಿರುವ ತ್ಯಾಜ್ಯ, ಕಟ್ಟಡ ಅವಶೇಷ ಹಾಗೂ ಅನುಪಯುಕ್ತ ವಸ್ತುಗಳ ಬೃಹತ್ ಸ್ವಚ್ಛತಾ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಿಂಗ್ ರಸ್ತೆಯಲ್ಲಿ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಹೀಗಾಗಿ ಸ್ವಚ್ಛತೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವರ್ತುಲ ರಸ್ತೆಯ ಸುಮಾರು ೪೩ ಕಿ.ಮೀ. ವ್ಯಾಪ್ತಿಯಲ್ಲಿರುವ ಬಡಾವಣೆಗಳ ಕೆಲವು ನಿವಾಸಿಗಳು ಕಸ, ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳು ಹಾಗೂ ಕಟ್ಟಡ ಅವಶೇಷಗಳನ್ನು ರಾತ್ರಿ ವೇಳೆ ತಂದು ಸುರಿದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ರಸ್ತೆಯ ಇಕ್ಕೆಲಗಳಲ್ಲಿ ಅಂದಗೆಡುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಶ್ರೀನಿವಾಸ್, ಮಧುಸೂದನ್, ಅಶ್ವಿನ್, ಶಿಲ್ಪಾ, ಕೆ.ಎಸ್. ಮೃತ್ಯುಂಜಯ, ಅಧಿಕ್ಷಕ ಇಂಜಿನಿಯರ್ ಮಂಜುನಾಥ್, ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಸುರೇಶ್, ಕಡಕೊಳ ಪಪಂ ಮುಖ್ಯಾಧಿಕಾರಿ ದೀಪಾ, ಬಿಲ್ಡರ್ಸ್ ಅಸೋಸಿಯೇಷನ್ನ ಪ್ರವೀಣ್, ಜಿಎಸ್ಎಸ್ನ ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು.
” ಸ್ವಚ್ಛತಾ ಕಾರ್ಯಕ್ರಮದ ವಿನೂತನ ಪ್ರಯೋಗಕ್ಕೆ ೫೦ ಜೆಸಿಬಿಗಳು, ೩೦ ಟಿಪ್ಪರ್ಗಳು, ೮ ಟ್ರಾಕ್ಟರ್ಗಳು ಸೇರಿದಂತೆ ಸುಮಾರು ೫೦೦ ಮಂದಿ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿದ್ಯಾರಣ್ಯಪುರಂನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮತ್ತು ಕಟ್ಟಡ ತ್ಯಾಜ್ಯವನ್ನು ಸಾತಗಳ್ಳಿಯ ಘಟಕಕ್ಕೆ ಸುರಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಭಾನುವಾರವೂ ಈ ಸ್ವಚ್ಛತಾ ಕಾರ್ಯದ ವಿನೂತನ ಪ್ರಯೋಗ ನಡೆಯಲಿದೆ.”
-ಶೇಖ್ ತನ್ವೀರ್ ಆಸಿಫ್ , ಆಯುಕ್ತ, ಮಹಾನಗರ ಪಾಲಿಕೆ





