Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ರಸ್ತೆ ಕಾಮಗಾರಿ ವಿಳಂಬ; ದೂಳು ಕುಡಿಯುವುದು ಅನಿವಾರ್ಯ

ಮಂಜು ಕೋಟೆ

ಸಾಗರೆ-ಬಿದರಹಳ್ಳಿ, ಬೀರಂಬಳ್ಳಿ-ಎನ್.ಬೇಗೂರು ರಸ್ತೆಗಳಲ್ಲಿ ಸಂಚರಿಸುವವರಿಗೆ ಅನಾರೋಗ್ಯ 

ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯ ಸಮೀಪದ ಮತ್ತು ಗಡಿಭಾಗದ ಮುಖ್ಯರಸ್ತೆಗಳ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು, ಪ್ರಯಾಣಿಕರು ಅನಾರೋಗ್ಯಕ್ಕೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಸಾಗರೆ-ಬಿದರಹಳ್ಳಿ ಮತ್ತು ಬೀರಂಬಳ್ಳಿ-ಎನ್.ಬೇಗೂರು ರಸ್ತೆಗಳು ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಏಳುವ ದೂಳಿನಿಂದಾಗಿ ಸಂಚರಿಸುವವರ, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

೨ ತಿಂಗಳುಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿಗೆ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಭೂಮಿ ಪೂಜೆ ನೆರವೇರಿಸಿದ್ದರು. ನಂತರ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ನಡೆಸಲು ರಸ್ತೆಯನ್ನು ಅಗೆದು ಹಾಕಿದ್ದಾರೆ. ಆದರೆ, ರಸ್ತೆ ದುರಸ್ತಿ ಕಾಮಗಾರಿಯನ್ನು ವೇಗವಾಗಿ ನಡೆಸದೆ ಮತ್ತು ರಸ್ತೆಗಳಿಗೆ ನೀರು ಸಿಂಪಡಿಸದೆ ಗುತ್ತಿಗೆದಾರರು ನಿರ್ಲಕ್ಷಿಸುತ್ತಿರುವುದರಿಂದ ಪ್ರತಿನಿತ್ಯ ಓಡಾಡುತ್ತಿ ರುವ ವಾಹನಗಳ ಸವಾರರು ಮತ್ತು ಸಾರ್ವಜನಿ ಕರು ದೂಳಿನಿಂದ ನರಕ ಯಾತನೆ ಪಡುತ್ತಿದ್ದಾರೆ.

ಇದಲ್ಲದೆ ಈ ರಸ್ತೆಯ ಮೂಲಕ ಕಬಿನಿ ಜಲಾಶಯಕ್ಕೆ ಹಾಗೂ ಭೀಮನ ಕೊಲ್ಲಿ ಮಾದೇಶ್ವರ ದೇವಸ್ಥಾನಕ್ಕೆ, ಅನೇಕ ರೆಸಾರ್ಟ್‌ಗಳಿಗೆ ಪ್ರತಿನಿತ್ಯ ನೂರಾರು ಜನ ಸಂಚರಿಸುತ್ತಾರೆ. ಜೊತೆಗೆ ರೈತರು, ವಿದ್ಯಾರ್ಥಿಗಳು, ವೃದ್ಧರು, ರೋಗಿಗಳು ಈ ರಸ್ತೆಯ ಮೂಲಕ ತಾಲ್ಲೂಕು ಕೇಂದ್ರವಾದ ಕೋಟೆ ಪಟ್ಟಣಕ್ಕೆ ಆಗಮಿಸುತ್ತಾರೆ. ಅವರೆಲ್ಲರೂ ದೂಳಿನಸಮಸ್ಯೆಯಿಂದ ಪರದಾಡುವಂತಾಗಿದ್ದು, ಅಧಿಕಾರಿಗಳು ಗುತ್ತಿಗೆದಾರರು, ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದು ಕಡೆ ಮೈಸೂರು-ಮಾನಂದವಾಡಿ ಹೆದ್ದಾರಿಯ ಅರಣ್ಯದೊಳಗೆ ನಡೆಸಲಾಗುತ್ತಿರುವ ರಸ್ತೆ ಕಾಮಗಾರಿ ಹಲವು ತಿಂಗಳುಗಳಿಂದ ನಿಂತು ಹೋಗಿದ್ದು ಇಲ್ಲೂ ಕೂಡ ದೂಳುಮಯವಾಗಿದ್ದು, ರಾಜ್ಯ, ಹೊರರಾಜ್ಯದ ಪ್ರಯಾಣಿಕರು, ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ನಮ್ಮ ರಾಜ್ಯದ ರಸ್ತೆ ಅವ್ಯವಸ್ಥೆ ಬಗ್ಗೆ ಹೊರರಾಜ್ಯದವರು ಕೀಳಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.

ಶಾಸಕ ಅನಿಲ್ ಚಿಕ್ಕಮಾದು ಅವರು ತಾಲ್ಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ತಂದರೂ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿ ಸದೇ ಇರುವು ದರಿಂದ ಇಂತಹ ಅನೇಕ ಸಮಸ್ಯೆಗಳು ಎದುರಾಗುತ್ತಿರುವುದು ವಿಪರ್ಯಾಸ.

” ಕಾಡಂಚಿನ ಗ್ರಾಮದಲ್ಲಿ ಬದುಕುತ್ತಿರುವ ನಾವು ಈ ಭಾಗದ ರಸ್ತೆ ಅವ್ಯವಸ್ಥೆಯಿಂದಾಗಿ ಕಳೆದ ಎರಡು ತಿಂಗಳುಗಳಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಈ ಭಾಗದಲ್ಲೂ ಮನುಷ್ಯರೇ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಬೇಕು.”

-ಬೈರೇಗೌಡ, ಜಕ್ಕಳ್ಳಿಮಾಳ

” ಬಿದರಳ್ಳಿ, ಮೂರ್‌ಬಂದ್ ಎಂಎಂ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ನೀರನ್ನು ಸಿಂಪಡಿಸಿಕೊಂಡು ಕೆಲಸ ನಡೆಸಬೇಕೆಂದು ಸೂಚಿಸಲಾಗಿದ್ದು, ನಾನೇ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಆದೇಶಿಸುತ್ತೇನೆ. ಸಮಸ್ಯೆಗಳು ಉದ್ಭವಿಸದಂತೆ ಕ್ರಮ ಕೈಗೊಳ್ಳುತ್ತೇನೆ.”

-ರಮೇಶ್, ಎಇಇ, ಲೋಕೋಪಯೋಗಿ ಇಲಾಖೆ

Tags:
error: Content is protected !!