Mysore
23
broken clouds

Social Media

ಬುಧವಾರ, 11 ಮಾರ್ಚ್ 2026
Light
Dark

ಕೆರೆಗಳಿಗೆ ಪುನಶ್ಚೇತನ; ವನ್ಯಜೀವಿಗಳಿಗಿಲ್ಲ ನೀರಿನ ಕೊರತೆ  

ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಗೂ ಮುನ್ನವೇ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡ ಅರಣ್ಯ ಇಲಾಖೆ

ವೀರನಹೊಸಹಳ್ಳಿ: ಈ ಬಾರಿ ಬೇಸಿಗೆಗೂ ಮುನ್ನವೇ ನಾಗರಹೊಳೆ ಅರಣ್ಯ ಪ್ರದೇಶದ ಕೆರೆಗಳು ಪುನಶ್ಚೇತನಗೊಂಡ ಪರಿಣಾಮ ವನ್ಯಜೀವಿಗಳಿಗೆ ನೀರಿನ ಕೊರತೆ ದೂರವಾದಂತಾಗಿದೆ.

ಕಾಡು ಪ್ರಾಣಿಗಳು ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಬಳಲಬಾರದೆಂಬ ಉದ್ದೇಶದಿಂದ ಈ ಬಾರಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆಗೂ ಮುನ್ನವೇ ಹಲವು ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಹೀಗಾಗಿ ಬತ್ತಿದ ಈ ಕೆರೆಗಳಿಗೆ ನೀರು ಬಂದಿದ್ದು, ಪ್ರಾಣಿಗಳಿಗೆ ನೀರಿನ ಅಭಾವ ತಪ್ಪಿದೆ.

ಹುಲಿಗಳು, ಹೆಚ್ಚಿನ ಸಂಖ್ಯೆಯ ಆನೆಗಳಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಣಿಕಂಠನ್ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಿನೀವಬಲ್ ಎನರ್ಜಿ ಡೆವಲಪ್ ಮೆಂಟ್ ಲಿಮಿಟೆಡ್ ಸಹಯೋಗದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆರೆಗಳಿಗೆ ಸೋಲಾರ್ ಪಂಪ್‌ಗಳ ಮುಖಾಂತರ ನೀರುಣಿಸುವ ಯೋಜನೆ ಹಮ್ಮಿಕೊಂಡಿದ್ದರು. ಕಾಡಿನಲ್ಲಿ ನೀರಿನ ಕೊರತೆ ನೀಗಿಸಲು ಸೋಲಾರ್ ಶಕ್ತಿಯಿಂದ ಚಾಲನೆಯಾಗುವ ೧೮ ಪಂಪ್ಗಳನ್ನು ಅಳವಡಿಸಿದ್ದರು.

ಬತ್ತಿದ ಕೆರೆಗಳಲ್ಲಿ ನೀರು: ಇದೀಗ ೧೦ ಕೆರೆಗಳನ್ನು ೧೬ರಿಂದ ೧೮ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕಾಡಿನಲ್ಲಿರುವ ನೀರಿನ ಪ್ರಮುಖ ಮೂಲಗಳಾದ ಕೆರೆಗಳಪುನಶ್ಚೇತನಗೊಳಿಸುವ ಕಾರ್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ ನಾಗರಹೊಳೆ ವ್ಯಾಪ್ತಿಯ ಒಣ ಪ್ರದೇಶಗಳಾದ ಅಂತರಸಂತೆ, ಮೇಟಿಕುಪ್ಪೆ ಆನೆ ಚೌಕೂರು, ವೀರನಹೊಸಹಳ್ಳಿ, ಇನ್ನಿತರ ಪ್ರದೇಶಗಳ ೧೦ ಕೆರೆಗಳನ್ನು ಬೇಸಿಗೆಗೂ ಮುನ್ನವೇ ಅಭಿವೃದ್ಧಿಗೊಳಿಸಲಾಗಿದೆ. ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳು ಹಾಗೂ ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ಕಾಲುವೆಗಳು ಹಾಗೂ ಕೆರೆಯಲ್ಲಿನ ಹೂಳನ್ನು ತೆಗೆಸಲಾಗಿದೆ. ಹೀಗಾಗಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಮಳೆಯ ನೀರು ಸರಾಗವಾಗಿ ಕೆರೆಯ ಒಡಲನ್ನು ಸೇರಿದೆ. ಹೀಗಾಗಿ ಬತ್ತಿದ ಕೆರೆಗಳಲ್ಲಿ ನೀರು ಸಂಗ್ರಹಣೆ ಯಾಗುತ್ತಿದೆ.

ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ: ಕೆರೆ, ಕಾಲುವೆಗಳ ಸುತ್ತ ಹಸಿರು ಹುಲ್ಲು ಬೆಳೆದಿದೆ. ಲಂಟಾನ ತೆಗೆದ ಜಾಗದಲ್ಲಿಯೂ ಹುಲ್ಲು ಬೆಳೆದಿದೆ. ಕೆರೆ ಬಳಿಯ ಮರಗಿಡಗಳೂ ಹಸಿರಿನಿಂದ ನಳನಳಿಸುತ್ತಿವೆ. ಇದರಿಂದಾಗಿ ಆನೆಗಳು, ಜಿಂಕೆಗಳು ಸೇರಿದಂತೆ ಇನ್ನಿತರ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ದೊರೆತಂತಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ತಿಳಿಸಿದರು

” ಸೂಕ್ತ ಸಂದರ್ಭದಲ್ಲಿ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದರಿಂದ ಕಾಡಿನಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ಕೆರೆಗೆ ಹರಿಯುತ್ತಿದೆ. ಇದರಿಂದ ಪ್ರಾಣಿಗಳಿಗೆ ಕುಡಿಯುವ ನೀರು ದೊರೆತಂತಾಗಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಸಚಿವರ ಮೇಲೆ ಒತ್ತಡ ತಂದು ರೈಲ್ವೆ ಬ್ಯಾರಿಕೆಡ್ ಅಳವಡಿಸಲು ಅನುದಾನ ಮಂಜೂರು ಮಾಡಿಸಿದ್ದೇನೆ. ಇದರಿಂದ ಸ್ವಲ್ಪಮಟ್ಟಿಗೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬಹುದು.”

-ಜಿ.ಡಿ.ಹರೀಶ್ ಗೌಡ, ಶಾಸಕ

” ಕಾಡಿನಲ್ಲಿ ಹಳ್ಳಗಳಿಗೆ, ನೀರು ಹರಿಯುವ ಕಾಲುವೆಗಳಿಗೆ ಅಡ್ಡಲಾಗಿ ಚೆಕ್ ಡ್ಯಾಮ್ ನಿರ್ಮಿಸಲಾಗುತ್ತದೆ. ಆದರೆ ಚೆಕ್ ಡ್ಯಾಮ್ ನಿರ್ಮಿಸುವಾಗ ಕಲ್ಲುಗಳನ್ನು ಬಳಕೆ ಮಾಡಿ ಸಣ್ಣ ಸಣ್ಣ ಕಟ್ಟೆ ಕಟ್ಟ ಬೇಕಾಗುತ್ತದೆ. ಹಾಗಾಗಿ ಚೆಕ್ ಡ್ಯಾಮ್ ನಿರ್ಮಾಣಕ್ಕಿಂತ ಕೆರೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಯಿತು. ಈಗ ಅಭಿವೃದ್ಧಿಗೊಂಡ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ.”

-ಲಕ್ಷ್ಮೀಕಾಂತ್, ಎಸಿಎಫ್‌ 

 

 

 

Tags:
error: Content is protected !!