ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ ರಸ್ತೆಯು ಹೊಮ್ಮರಗಳ್ಳಿ ಹಾಗೂ ಹೆಗ್ಗಡದೇವನ ಕೋಟೆ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಒಂದು ವಾಹನ ಬಂದರೆ ಸಾಕು, ಅದರಿಂದ ವಿಪರೀತ ದೂಳು ಆವರಿಸಿಕೊಳ್ಳುತ್ತದೆ. ಈ ದೂಳಿನಿಂದ ಪರಿಸರ ಕಲುಷಿತವಾಗಿರುವುದಲ್ಲದೆ, ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿದೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿರುವುದರಿಂದ ದ್ವಿಚಕ್ರವಾಹನ ಸವಾರರು ಹಲವು ಬಾರಿ ಬಿದ್ದು ಕೈ, ಕಾಲು ಮುರಿದುಕೊಂಡಿರುವ ಉದಾಹರಣೆಗಳಿವೆ. ಜೊತೆಗೆ ಆಗಾಗ ಸಣ್ಣಪುಟ್ಟ ಅಪಘಾತಗಳೂ ಜರುಗುತ್ತಿವೆ. ಮಳೆಗಾಲದಲ್ಲಂತೂ ಪಾದಚಾರಿಗಳು ಹಾಗೂ ಸವಾರರಿಗೆ ಈ ರಸ್ತೆಯಲ್ಲಿ ಓಡಾಡುವುದು ಒಂದು ರೀತಿಯ ಸವಾಲಿನ ಕೆಲಸವಾಗಿದೆ. ಆದ್ದರಿಂದ ಈ ವ್ಯಾಪ್ತಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರಸ್ತೆಯನ್ನು ಡಾಂಬರೀಕರಣ ಮಾಡಿಸಿ, ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಬಿ.ಎಸ್.ಸಾಯಿ ಸಂದೇಶ್, ಮೈಸೂರು



