ಎಚ್.ಡಿ.ಕೋಟೆ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿದ್ದು, ಸರಿಯಾದ ಮೂಲ ಸೌಕರ್ಯಗಳಿಲ್ಲದೆ ಈ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಗರ ಭಾಗದಲ್ಲಿರುವ ಖಾಸಗಿ ಶಾಲೆಗಳ ಮೊರೆ ಹೋಗುವಂತಾಗಿದೆ. ತಾಲ್ಲೂಕಿನಲ್ಲಿ ಅನೇಕ ಕುಗ್ರಾಮಗಳು, ಆದಿವಾಸಿ ಸಮುದಾಯಗಳ ಹಾಡಿಗಳು ಹೆಚ್ಚಾಗಿವೆ. ಇಲ್ಲಿನ ಮಕ ಳು ವಸತಿ ಮತ್ತು ವಿದ್ಯಾಭ್ಯಾಸಕ್ಕಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆಶ್ರಯಿಸಿದ್ದಾರೆ. ತಾಲ್ಲೂಕಿನಲ್ಲಿ ಮೂರು ವಸತಿ ಶಾಲೆಗಳಿದ್ದು, ಅಣ್ಣೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮೇಟಿಕುಪೆ ಸಮೀಪದ ಸೊಳೆ ಪುರ ಹಾಡಿಯಲ್ಲಿ ಒಂದು ಶಾಲೆ ಇದ ರೆ, ಅಂತರಸಂತೆ ಸಮೀಪದ ಶಿರಮಹಳ್ಳಿ ಬಳಿ ಒಂದು ಶಾಲೆ, ಕೆ.ಬೆಳತ್ತೂರು ಗ್ರಾಮದಲ್ಲಿ ಮತ್ತೊಂದು ಶಾಲೆ ಇದೆ. ಸದ್ಯಕೆ ಈ ಮೂರೂ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತಷ್ಟು ಶಾಲೆಗಳನ್ನು ತೆರೆದು ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ. ಹೈರಿಗೆ ವ್ಯಾಪ್ತಿ ಸೇರಿದಂತೆ ಹಂಪಾಪುರ ಹೋಬಳಿ ಕೆಂದ್ರದಲ್ಲಿಯೂ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಿದರೆ ಅಕ್ಕ-ಪಕ್ಕದ ೨೦ರಿಂದ ೩೦ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ ಮಕ್ಕಳು ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಗೋಳು ತಪ್ಪುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಹಂಪಾಪುರ ಅಥವಾ ಹೊಮ್ಮರಗಳ್ಳಿ ಸಮೀಪ ಮತ್ತೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆಯಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.





