ಎರಡು ಬಾರಿ ಪ್ರಧಾನಿಯಾಗಿ, ಆರ್ಥಿಕ ತಜ್ಞರಾಗಿ ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗರ ನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.
ದೇಶಕ್ಕೆ ಮನಮೋಹನ್ ಸಿಂಗರ ಕೊಡುಗೆ ಅಪಾರ. ಆರ್ಥಿಕ ಸಲಹೆಗಾರರಾಗಿ, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರಾಗಿ, ಗವರ್ನರ್ ಆಗಿ, ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತದ ಹಣಕಾಸು ಸಚಿವರಾಗಿ, ಎರಡು ಬಾರಿ ಪ್ರಧಾನ ಮಂತ್ರಿಗಳಾಗಿ ಹಾಗೂ ರಾಜ್ಯಸಭಾ ಸದಸ್ಯರಾಗುವ ಜತೆಗೆ ಅನೇಕ ಹುದ್ದೆಗಳನ್ನು ಅಲಂಕರಿಸಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದರು.
೨೦೦೪ರಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಮೊದಲ ಬಾರಿಗೆ ಉತ್ತಮ ಆಡಳಿತ ನೀಡಿದ ಮನಮೋಹನ್ ಸಿಂಗ್ ೨೦೦೯-೨೦೧೪ರ ಅವಧಿಗೆ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದರು.
ತಮ್ಮ ಅಪಾರ ಜ್ಞಾನ ಹಾಗೂ ದೂರದೃಷ್ಟಿಯಿಂದ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದ ಮನಮೋಹನ್ ಸಿಂಗ್ ಅವರು, ಸ್ವತಃ ಅರ್ಥಶಾಸ್ತ್ರಜ್ಞರು ಹಾಗೂ ರಾಜನೀತಿಜ್ಞರಾಗಿದ್ದರಿಂದ ಭಾರತ ಆರ್ಥಿಕ ಸಂಕಷ್ಟ ಎದುರಿಸಿದಾಗೆಲ್ಲ ದೇಶವನ್ನು ತಮ್ಮ ಬುದ್ಧಿವಂತಿಕೆಯಿಂದ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಪ್ರಬುದ್ಧ ರಾಜಕಾರಣಿಯನ್ನು ಕಳೆದುಕೊಂಡಿದ್ದು ಭಾರತಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
-ರಾಜೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.





