Mysore
26
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ:  ಶಾಲಾ ಮಕ್ಕಳ ಪ್ರವಾಸ: ಮುನ್ನೆಚ್ಚರಿಕೆ ಅಗತ್ಯ

ಓದುಗರ ಪತ್ರ

ಇತ್ತೀಚಿನ ದಿನಗಳಲ್ಲಿ, ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಶೈಕ್ಷಣಿಕ ಅವಧಿಯ ವರ್ಷದಲ್ಲಿ ಒಂದು ದಿನದ ಮಟ್ಟಿಗೆ ಶಾಲಾ ಪ್ರವಾಸ ಕೈಗೊಳ್ಳಲಾಗುತ್ತದೆ. ಕೆಲವು ಶಾಲೆಗಳ ಮುಖ್ಯಸ್ಥರು, ಪ್ರವಾಸ ಹೊರಡುವ ಸಂದರ್ಭದಲ್ಲಿ, ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳದೇ ಇರುವುದು ಸರಿಯಲ್ಲ. ಶಾಲೆಗಳ ಮುಖ್ಯಸ್ಥರು ಆಯಾ ಶಾಲಾ ವ್ಯಾಪ್ತಿಯ ಬಿಇಓರವರಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು, ಆದರೆ ಈ ನಿಯಮವನ್ನು ಬಹುತೇಕ ಶಾಲೆಗಳಲ್ಲಿ ಪಾಲಿಸುವುದಿಲ್ಲ.  ಸಾಮಾನ್ಯವಾಗಿ ವರ್ಷದ ಕೊನೆಯ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲೇ ಎಲ್ಲಾ ಶಾಲೆಗಳಲ್ಲಿ ಪ್ರವಾಸ ಕೈಗೊಳ್ಳುವುದರಿಂದ ಸಂಚಾರ ದಟ್ಟಣೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ, ಇದರ ಬದಲಾಗಿ ಆ ಶೈಕ್ಷಣಿಕ ವರ್ಷದ ಯಾವ ತಿಂಗಳಲ್ಲಿ ಬೇಕಾದರೂ ಪ್ರವಾಸ ಕೈಗೊಳ್ಳುವಂತಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಯಾಣ ದರ ಕಡಿಮೆ ಎನ್ನುವ ಕಾರಣಕ್ಕಾಗಿ ಖಾಸಗಿ ಬಸ್‌ಗಳ ಮೊರೆ ಹೋಗುತ್ತಾರೆ, ಅದರ ಬದಲು ಕಡ್ಡಾಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲೇ ಪ್ರವಾಸ ಕೈಗೊಳ್ಳಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ನಿಯಮ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಬೇಕು ಹಾಗೂ ಪ್ರವಾಸ ಹೊರಡುವ ಪ್ರತಿ ವಿದ್ಯಾರ್ಥಿ/ವಿದ್ಯಾರ್ಥಿನಿಯ ಮೇಲೆ ವೈಯಕ್ತಿಕವಾಗಿ ಕನಿಷ್ಠ ೧೦ ಲಕ್ಷ ರೂ. ಜೀವ ವಿಮಾ ಪಾಲಿಸಿ ಇರುವಂತೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!