ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ ಪರಿಶಿಷ್ಟ ಜಾತಿಯ ೧೨ಜನ ರೈತರಿಗೆ ಜಮೀನನ್ನು ಮಂಜೂರು ಮಾಡಲಾಗಿತ್ತು. ನೀರಿನ ಕೊರತೆ ಹಾಗೂ ಮಳೆಯ ಅಭಾವದಿಂದ ನಾಲ್ಕಾರು ವರ್ಷ ರೈತರು ೩೬ ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡದೇ ಖಾಲಿ ಬಿಟ್ಟಿದ್ದರು.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಒಂದಿಬ್ಬರು ಅನಧಿಕೃತವಾಗಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಮೂಲ ಮಂಜೂರಾತಿದಾರರು ವ್ಯವಸಾಯ ಮಾಡಲು ಹೋದಾಗ ದಬ್ಬಾಳಿಕೆಯಿಂದ ಜಮೀನನ್ನು ಬಿಟ್ಟುಕೊಡದೆ ವ್ಯವಸಾಯ ಮಾಡುತ್ತಿರುತ್ತಾರೆ. ಸದರಿ ಜಮೀನನ್ನು ಮೂಲ ಮಂಜೂರಾತಿದಾರರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳುವಂತೆ ಕೊಳ್ಳೇಗಾಲ ಉಪವಿಭಾಗಾಧಿಕಾರಿಯವರು ಆದೇಶ ನೀಡಿದ್ದು, ಸದರಿ ಆದೇಶದಂತೆ ಕ್ರಮ ಕೈಗೊಳ್ಳದೆ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈಗಲಾದರೂ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.
-ಆರ್.ಮಹದೇವಯ್ಯ, ಆಲೂರು ಗ್ರಾಮ, ಚಾ.ನಗರ ತಾ





