ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಆವರಣದಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮದ್ಯವ್ಯಸನಿಗಳು ಹೆಣ್ಣು ಮಕ್ಕಳಿಗೆ ಮುಜುಗರವಾಗುವಂತೆ ವರ್ತಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ‘ಆಂದೋಲನ’ ದಿನಪತ್ರಿಕೆಯಲ್ಲಿ ಅಂಬಿಕ ಎಂಬವವರು ಬರೆದ ಓದುಗರ ಪತ್ರವೊಂದು ಅ.1ರಂದು ಪ್ರಕಟಗೊಂಡಿದೆ. ಇದು ಅಕ್ಷರಶಃ ಸತ್ಯ. ತಡರಾತ್ರಿಯವರೆಗೂ ನಡೆಯುತ್ತಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸಾಕಷ್ಟು ಯುವತಿಯರು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಆದರೆ ಈ ಕಾರ್ಯಕ್ರಮಕ್ಕೆ ಕೆಲ ಮದ್ಯವ್ಯಸನಿಗಳು ಬಂದು ಹೆಣ್ಣುಮಕ್ಕಳಿರುವ ಕಡೆ ಅಸಭ್ಯವಾಗಿ ವರ್ತಿಸುವುದಲ್ಲದೇ, ಅವರಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದಾರೆ. ಇದನ್ನು ಸಾಕಷ್ಟು ಬಾರಿ ನಾನೂ ಗಮನಿಸಿದ್ದೇನೆ. ಇನ್ನು ಕೆಲವರು ಗಂಗೋತ್ರಿ ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಗಿಡಮರಗಳನ್ನು ಕೀಳುವ ಕೆಲಸವನ್ನೂ ಮಾಡಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಇಷ್ಟೊಂದು ಪೊಲೀಸ್ ಬಂದೋಬಸ್ತ್ ಇದ್ದರೂ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಇಲ್ಲ ಎಂದಾದರೆ ನಗರದ ಹೊರ ಭಾಗದಲ್ಲಿ ಆಯೋಜನೆಗೊಂಡಿರುವ ‘ಯುವ ದಸರಾ’ದ ಕಾರ್ಯಕ್ರಮಗಳಿಗೆ ಹಣ್ಣು ಮಕ್ಕಳು ಹೋಗುವುದಾದರೂ ಹೇಗೆ? ಈಗಾಗಲೇ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಆದಾಗ್ಯೂ ಈ ಬಾರಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ಸಮೀಪ ಯುವ ದಸರಾ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಪೊಲೀಸ್ ಇಲಾಖೆಯು ಕಾರ್ಯಕ್ರಮಕ್ಕೆ ಬರುವವರನ್ನು ತಪಾಸಣೆ ಮಾಡುವ ಮೂಲಕ ಮದ್ಯವ್ಯಸನಿಗಳ ಹಾವಳಿಗೆ ಕಡಿವಾಣ ಹಾಕುವ ಜತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು,