ಮೈಸೂರು ಜಿಲ್ಲೆ, ಎಚ್.ಡಿ. ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಮಲಾರ ಕಾಲೋನಿ’ ಗ್ರಾಮವು ಒಂದು ಸ್ವಚ್ಛ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಾಗಿ ವಾಸವಿದ್ದಾರೆ. ಬೆಳಗನಹಳ್ಳಿ ಕಾವಲ್ನ ಸರ್ವೆ ನಂಬರ್ ೧ರಲ್ಲಿ ೨೦೧೦-೧೧ರಲ್ಲಿ ಆರ್ಟಿಸಿ ಸ್ಕೆಚ್ ಆಗಿದೆ. ಇಲ್ಲಿ ಸುಮಾರು ೧ ಎಕರೆ, ಐದು ಗುಂಟೆ ಜಾಗವಿದ್ದು, ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಸಾವು ಸಂಭವಿಸಿದರೆ ಶವಸಂಸ್ಕಾರ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಈ ಗ್ರಾಮದಲ್ಲಿ ಬಡ ಕುಟುಂಬಗಳು ಹೆಚ್ಚು ಇವೆ. ಕೆಲವರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ಮಾಡುತ್ತಾರೆ, ಕೆಲವರಿಗೆ ಜಮೀನು ಇಲ್ಲದೆ, ಶವ ಸಂಸ್ಕಾರ ಮಾಡಲು ಜಾಗವೂ ಇಲ್ಲದೆ ಪರದಾಡುತ್ತಿದ್ದಾರೆ. ಈ ವಿಚಾರವನ್ನು ತಾಲ್ಲೂಕು ಕಚೇರಿಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಸ್ಮಶಾನ ಜಾಗ ಒದಗಿಸಲು ಮುಂದಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಸಂಸದರು, ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ‘ಮಲಾರಾ ಕಾಲೋನಿ’ ಗ್ರಾಮಕ್ಕೆ ಶವಸಂಸ್ಕಾರ ಮಾಡಲು ಒತ್ತುವರಿ ಆಗಿರುವ ಜಾಗವನ್ನು ಬಿಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಶವ ಸಂಸಾರ ಮಾಡಲು ಶೆಡ್ಡು ನಿರ್ಮಾಣ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.





