ಸರ್ಕಾರ ಸಾರಿಗೆ, ಹಾಲು, ನೀರು ಮತ್ತು ವಿದ್ಯುತ್ ದರ ಏರಿಕೆ ಮಾಡಲು ಮುಂದಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸರ್ಕಾರದ ಈ ಬೆಲೆ ಏರಿಕೆ ನೀತಿ ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಆತಂಕ ತಂದೊಡ್ಡಿದೆ.
ಕೆಲವು ತಿಂಗಳ ಹಿಂದೆ ಕರ್ನಾಟಕ ಹಾಲು ಮಹಾಮಂಡಳಿ ಪ್ರತಿ ಹಾಲಿನ ಪ್ಯಾಕೆಟ್ ಮೇಲೆ ಎರಡು ರೂ.ಗಳನ್ನು ಹೆಚ್ಚಿಸಿ, ಹೆಚ್ಚುವರಿ ಹಾಲನ್ನು ನೀಡಿತು. ಇದೀಗ ಮತ್ತೆ ಪ್ರತಿ ಲೀ. ಹಾಲಿನ ಮೇಲೆ ೫ ರೂ.ಗಳನ್ನು ಏರಿಸಲು ಮುಂದಾಗಿರುವುದು ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದರೊಂದಿಗೆ ಬಸ್ ಪ್ರಯಾಣ ದರವನ್ನೂ ಶೇ.೧೫ರಷ್ಟು ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆಯು ನೀರಿನ ದರ ಹಾಗೂ ಎಸ್ಕಾಂ ವಿದ್ಯುತ್ ದರವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಇವೆಲ್ಲವನ್ನೂ ಗಮನಿಸಿದರೆ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಬೆಲೆ ಏರಿಕೆಯ ಹಾದಿ ಹಿಡಿದಿದೆಯೇನೋ ಅನಿಸುತ್ತದೆ. ಸಾರಿಗೆ ಇಲಾಖೆಯಲ್ಲಿನ ಸಿಬ್ಬಂದಿಗೆ ವೇತನ ನೀಡುವುದಕ್ಕೂ ೨,೦೦೦ ಕೋಟಿ ರೂ.ಗಳನ್ನು ಸಾಲ ಮಾಡಿರುವ ಸರ್ಕಾರಕ್ಕೆ ಹಾಲಿನ ಪ್ರೋತ್ಸಾಹ ಧನ ನೀಡಲೂ ಹಣ ಇಲ್ಲದಂತಾಗಿದೆ. ಒಟ್ಟಾರೆ ಸರ್ಕಾರದ ಈ ಬೆಲೆ ಏರಿಕೆ ನೀತಿ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಆಡಳಿತಾರೂಢ ಸರ್ಕಾರವನ್ನು ಪ್ರಶ್ನಿಸಬೇಕಾದ ವಿಪಕ್ಷಗಳು ನಿಶ್ಶಕ್ತವಾಗಿರುವುದು ಬೇಸರದ ಸಂಗತಿ.
–ವಿಜಯ್ ಹೆಮ್ಮಿಗೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು.





