ಮೈಸೂರಿನ ಜಯಲಕ್ಷ್ಮಿಪುರಂ ಮೂಲಕ ಹಾದು ಹೋಗುವ ಗೋಕುಲಂನ ಮುಖ್ಯರಸ್ತೆಯಲ್ಲಿ ಕೆಲ ರೆಸ್ಟೋರೆಂಟ್ಗಳು, ಕೆಫೆ,ಪಿಜ್ಜಾ ಹಾಗೂ ಬರ್ಗರ್ ಸೆಂಟರ್ಗಳು ಇವೆ. ಈ ಮಳಿಗೆಗಳಿಗೆ ಕನ್ನಡ ಫಲಕಗಳನ್ನು ಹಾಕಿರುವುದು ಶ್ಲಾಘನೀಯ.
ಆದರೆ ಇಲ್ಲಿ ಕೆಲಸ ಮಾಡುವವರು ಮಾತ್ರ ಕನ್ನಡಿಗರಲ್ಲ ಎಂಬುದು ವಿಪರ್ಯಾಸದ ಸಂಗತಿ. ಹೊರ ರಾಜ್ಯ ಹಾಗೂ ವಿದೇಶಿಗರಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿಗೆ ಬರುವ ಸ್ಥಳೀಯ ಗ್ರಾಹಕರು ಅನ್ಯಭಾಷಿಗರೊಂದಿಗೆ ಏನು ಮಾತಾಡಬೇಕು, ಏನನ್ನು ಕೇಳಿ ಪಡೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.
ಜೊತೆಗೆ ತಮಗಿಷ್ಟವಾದ ತಿಂಡಿ ತಿನಿಸುಗಳನ್ನು ತೆಗೆದುಕೊಳ್ಳಲು ಇಂತಹ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರು ಪರಕೀಯರಂತೆ ಹರಸಾಹಸ ಪಡುವಂತಾಗಿದೆ. ಹೊರ ರಾಜ್ಯ ಹಾಗೂ ವಿದೇಶಿಗರು ಸಕ್ರಿಯವಾಗಿ ಕೆಲಸ ಮಾಡುತ್ತಾರೆ ಎಂದು ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿರಬಹುದು. ಆದರೆ ಅವರಿಗೆ ಭಾಷಾ ಜ್ಞಾನದ ಕೊರತೆಯಿಂದ ಗ್ರಾಹಕರಿಗೆ ತೊಡಕುಂಟಾಗುತ್ತದೆ. ಹಾಗಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಕನ್ನಡಿಗರಿಗೂ ಹೆಚ್ಚು ಅವಕಾಶ ಕೊಡಬೇಕಿದೆ.
-ಬಿ.ಎಸ್.ಸಾಯಿ ಸಂದೇಶ್, ಮೈಸೂರು


