ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ ಕಡಿದ ಎಲ್ಲ ೪೦ ಮರಗಳಿಗೆ ಬದಲಾಗಿ, ಈಗ ಗಿಡಗಳನ್ನು ನೆಟ್ಟರೆ ೫ ವರ್ಷದೊಳಗೆ ೧೨ ಅಡಿ ಬೆಳೆಯುತ್ತವೆ ಎಂದು ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಪರಿಸರ ಪ್ರೇಮಿಗಳಿಗೆ ಭರವಸೆ ನೀಡಿದ್ದುದು ಸರಿಯಷ್ಟೇ. ಆದರೆ ಇದುವರೆಗೂ ಒಂದೂ ಗಿಡವನ್ನು ನೆಡದೆ ಇರುವುದು ಸೋಜಿಗವೇ ಸರಿ. ಇದನ್ನು ಗಮನಿಸಿದ ಹಸಿರು ಪ್ರೇಮಿಗಳಾದ ರಘುಲಾಲ್ ಅಂಡ್ ಕಂಪೆನಿಯವರು ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು, ರಕ್ಷಣೆ ಮಾಡಿ, ನೀರು ಹಾಕಿ ಎರಡು ತಿಂಗಳುಗಳಿಂದ ಪೋಷಿಸುತ್ತಿದ್ದ ಗಿಡಗಳನ್ನು ಪುಟ್ಪಾತ್ ನಿರ್ಮಾಣ ಮಾಡಲು ಪಾಲಿಕೆಯವರು ಕಿತ್ತೆಸೆದಿರುವುದು ವಿಪರ್ಯಾಸವೇ ಸರಿ.
ಹೈದರಾಲಿ ರಸ್ತೆ ಈಗ ಜೋಡಿರಸ್ತೆಯಾಗಿ ಕಂಗೊಳಿಸುತ್ತಿದ್ದು, ನಗರ ಪಾಲಿಕೆ ಅಧಿಕಾರಿಗಳು ಪರಿಸರ ಪ್ರೇಮಿಗಳಿಗೆ ಗಿಡಗಳನ್ನು ನೆಡುವ ಭರವಸೆಯನ್ನು ನೀಡಿದ್ದುದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಂತೆ ಈಗ ಗಿಡಗಳನ್ನು ನೆಟ್ಟು ಪಾಲಿಕೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಒಳಿತು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು




