ಮೈಸೂರಿನ ರಾಮಕೃಷ್ಣ ನಗರದ ಒಳಚರಂಡಿಗೆ ಹೊಸದಾಗಿ ಪೈಪ್ಗಳನ್ನು ಅಳವಡಿಸಲು ರಸ್ತೆಯನ್ನು ಅಗೆಯಲಾಗಿತ್ತು. ಪೈಪ್ಗಳನ್ನು ಅಳವಡಿಸಿ ತಿಂಗಳುಗಳೇ ಕಳೆದರೂ ರಸ್ತೆಗೆ ಡಾಂಬರ್ ಹಾಕದೇ ಇರುವುದರಿಂದ ಮಳೆಗಾಲದಲ್ಲಿ ಕೆಲಸರು ಹಾಗೂ ಬೇಸಿಗೆಯಲ್ಲಿ ದೂಳಿನಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ.
ರಾಮಕೃಷ್ಣನಗರ ಜಿ ಬ್ಲಾಕ್ನಲ್ಲಿ ಇರುವ ಗಣಪತಿ ದೇವಸ್ಥಾನದಿಂದ ಹಿಡಿದು ಕುವೆಂಪುನಗರ ಪೊಲೀಸ್ ಠಾಣೆಯವರೆಗೂ ರಸ್ತೆಯು ಹಳ್ಳಗಳಿಂದ ಕೂಡಿದೆ, ಇಂತಹ ರಸ್ತೆಯಲ್ಲಿ ಒಂದು ಬಸ್ಸು ಬಂದರೆ ಸಾಕು ರಸ್ತೆಯೇ ಕಾಣಿಸದಷ್ಟು ದೂಳು ಆವರಿಸುತ್ತದೆ.
ದ್ವಿಚಕ್ರ ವಾಹನಗಳು ಸವಾರರಂತೂ ಒಂದು ಕೈಯಲ್ಲಿ ಮೂಗನ್ನು ಮುಚ್ಚಿಕೊಂಡು, ಮತ್ತೊಂದು ಕೈಯಲ್ಲಿ ವಾಹನ ಚಲಾಯಿಸುತ್ತಾರೆ. ದೂಳಿನಿಂದಾಗಿ ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವ ಪದಚಾರಿಗಳು ಮಾಸ್ಕನ್ನು ಕಡ್ಡಾಯವಾಗಿ ಬಳಸುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟವರು ರಸ್ತೆಗೆ ಡಾಂಬರು ಹಾಕಿಸುವ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಾಗಿದೆ.
-ಬಿ.ಎಸ್.ಸಾಯಿ ಸಂದೇಶ್, ಮೈಸೂರು





