ಹುಣಸೂರು ಮುಖ್ಯ ರಸ್ತೆಯಲ್ಲಿರುವ ಇಲವಾಲ, ಬೆಳವಾಡಿ, ಹೂಟ ಗಳ್ಳಿ, ಹಿನಕಲ್ ಸೇರಿದಂತೆ ಮೈಸೂರು ನಗರದೊಳಗೂ ಸಂಚರಿಸುವ ಟಾಟಾ ಕಂಪೆನಿಯ ಮ್ಯಾಜಿಕ್ ಆಟೋ ಚಾಲಕರು, ಸಾರ್ವಜನಿಕರು ಹೇಳಿದ ಜಾಗಕ್ಕೆ ಬಿಟ್ಟು, ಇಂತಿಷ್ಟು ಹಣ ಪಡೆದು ನಿತ್ಯ ಅಷ್ಟೋ ಇಷ್ಟೋ ಬಾಡಿಗೆ ದುಡಿಯುತಿದ್ದಾರೆ. ಇವರಲ್ಲಿ ಕೆಲವು ಚಾಲಕರು ಆಟೋ ಭರ್ತಿಯಾಗಿದ್ದರೂ, ದುರಾಸೆಯಿಂದ ಮತ್ತಷ್ಟು ಜನರನ್ನು ಹತ್ತಿಸಿ ಕೊಂಡು ಫುಟ್ ಬೋರ್ಡ್ ಮೇಲೆ ನಿಲ್ಲಿಸಿ ಕೊಂಡು ಹೋಗುತ್ತಾರೆ. ಈ ವೇಳೆ ಫುಟ್ ಬೋರ್ಡ್ ಮುರಿದೋ ಅಥವಾ ಹಳ್ಳಕೊಳ್ಳ ಬಂದಾಗ ಪ್ರಯಾಣಿಕರು ಕಾಲು ಜಾರಿ ಬಿದ್ದರೆ, ಪ್ರಾಣಹಾನಿಯಾಗುವ ಸಂಭವವೇ ಹೆಚ್ಚು! ಜೊತೆಗೆ, ಹಿಂದೆ ಬರುವ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಂಚಾರ ಪೊಲೀಸರು ಈ ಆಟೋ ಚಾಲಕರು ಜನರನ್ನು ಕರೆದೊಯ್ಯಲು ಸೂಕ್ತ ನಿಯಮ ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಹೇಳಬೇಕು, ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಕ್ರಮ ಕೈಗೊಂಡು ಅನಾಹುತಗಳನ್ನು ತಪ್ಪಿಸಬೇಕು.
-ಬಿ. ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





