ಮೈಸೂರು ದಸರಾ ಮಹೋತ್ಸವವನ್ನು ಕಣ್ಣುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಇಡೀ ನಾಡೇ ನವರಾತ್ರಿಯ ಸಂಭ್ರಮದಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಮುಡಾ ಪ್ರಕರಣ ಸಂಚಲನ ಸೃಷ್ಟಿಸಿದ್ದು, ರಾಜ್ಯದ ಮುಖ್ಯಮಂತ್ರಿಯೇ ಆರೋಪಿ ಸ್ಥಾನದಲ್ಲಿ ನಿಂತಿರುವುದು ಬೇಸರದ ಸಂಗತಿ. ಈಗ ಮೈಸೂರಿನಲ್ಲಿ ಎಲ್ಲಿ ನೋಡಿದರೂ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿವೆ. ಕಾರ್ಯಕ್ರಮಗಳ ಉದ್ಘಾಟನಾ ವೇದಿಕೆಗಳು ಜನಪ್ರತಿನಿಧಿಗಳಿಂದ ತುಂಬಿರುತ್ತವೆ. ಈ ವೇಳೆ ಜನಪ್ರತಿನಿಧಿಗಳು ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಮಾತನಾಡಬೇಕು, ಆದರೆ ಮೊನ್ನೆ ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಜಾ.ದಳ ಶಾಸಕ ಜಿ.ಟಿ.ದೇವೇಗೌಡ ದಸರಾ ಕುರಿತು ಮಾತನಾಡುವ ಬದಲಿಗೆ ಮುಡಾ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಸಾರ್ವಜನಿಕ ವೇದಿಕೆಯನ್ನು ರಾಜಕೀಯ ವೇದಿಕೆಯನ್ನಾಗಿಸಿಕೊಳ್ಳುವುದು ಎಷ್ಟು ಸರಿ? ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಎಲ್ಲ ಪಕ್ಷದವರೂ ಭಾಗವಹಿಸುವುದರಿಂದ ಇಲ್ಲಿ ರಾಜಕಾರಣಿಗಳು ಕಾರ್ಯಕ್ರಮದ ಬಗ್ಗೆ ಮಾತ್ರ ಮಾತನಾಡಬೇಕು. ಮುಂದಾದರೂ ಯಾವ ವೇದಿಕೆಯಲ್ಲಿ ಯಾವ ವಿಚಾರ ಮಾತನಾಡಬೇಕು ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಲಿ.
ಶಿವಕುಮಾರ, ತುಂಬಸೋಗೆ, ಎಚ್.ಡಿ.ಕೋಟೆ ತಾ.





