ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮತ್ತು ಸೆಂಟ್ರಲ್ ಐಡಿ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ತೊಂದರೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಬ್ಬ ರೈತ ನಾಲ್ಕು ಬಾರಿ ಒಟಿಪಿ ಪಡೆಯಬೇಕಾದ ಅನಿವಾರ್ಯತೆಯಿದೆ. ಪದೇ ಪದೇ ಸರ್ವರ್ ಕೈಕೊಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಶೇ.೬೦ರಷ್ಟು ನೆಟ್ವರ್ಕ್ ಸಮಸ್ಯೆ ಇರುವುದರಿಂದ ಇಂತಹ ಸಂಕೀರ್ಣ ಪ್ರಕ್ರಿಯೆಗಳು ರೈತರನ್ನು ಹೈರಾಣಾಗಿಸುತ್ತಿವೆ. ಸರ್ಕಾರವು ಈ ಕೂಡಲೇ ಸರ್ವರ್ ಸಾಮರ್ಥ್ಯ ಹೆಚ್ಚಿಸಿ ಇ-ಕೆವೈಸಿ ಗಡುವನ್ನು ಕನಿಷ್ಠ ೧೫ ದಿನಗಳ ಕಾಲ ವಿಸ್ತರಿಸಬೇಕು. ಕೇವಲ ಒಟಿಪಿ ಬದಲಿಗೆ ಬಯೋಮೆಟ್ರಿಕ್ ಅಥವಾ ಗ್ರಾಮ ಪಂಚಾಯಿತಿ ಮಟ್ಟದ ವಿಶೇಷ ಶಿಬಿರಗಳ ಮೂಲಕ ದಾಖಲಾತಿಗಳನ್ನು ದೃಢೀಕರಿಸುವ ಪರ್ಯಾಯ ಮಾರ್ಗ ಅನುಸರಿಸುವುದು ಉತ್ತಮ. ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು




