ನಮ್ಮ ರಾಜ್ಯದ ಗಡಿಭಾಗಗಳಲ್ಲಿನ ಅನ್ಯಭಾಷಾ ಮಾಧ್ಯಮ ಶಾಲೆಗಳಲ್ಲಿ (ತಮಿಳು, ಮರಾಠಿ, ಮಲಯಾಳಂ, ಉರ್ದು, ತೆಲುಗು) ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿ ಸುವ ಸರ್ಕಾರದ ನಿರ್ಧಾರವು ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿರುವುದು ವಿಷಾದ ಕರ ಸಂಗತಿಯಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದರೂ, ಗಡಿ ಜಿಲ್ಲೆಗಳಲ್ಲಿ ನಮ್ಮ ಭಾಷೆಯು ಪರಕೀಯರಂತೆ ಅನಾಥವಾಗಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ.
ನೆರೆಯ ರಾಜ್ಯಗಳು ತಮ್ಮ ಭಾಷೆಯ ರಕ್ಷಣೆಗಾಗಿ ಉಗ್ರವಾದ ನಿಲುವು ತಳೆಯುತ್ತಿರುವಾಗ, ನಮ್ಮ ಸರ್ಕಾರವು ‘ಸಮಿತಿ’, ‘ಚರ್ಚೆ’ ಎಂಬ ನೆಪವೊಡ್ಡಿ ಕಾಲಹರಣ ಮಾಡುತ್ತಿರುವುದು ಕನ್ನಡ ವಿರೋಧಿ ಧೋರಣೆಯಲ್ಲದೆ ಮತ್ತೇನು? ಕನ್ನಡದ ಅನ್ನ ಉಣ್ಣುತ್ತಾ, ಇಲ್ಲಿನ ಸವಲತ್ತು ಪಡೆಯುವ ಯಾವುದೇ ಶಿಕ್ಷಣ ಸಂಸ್ಥೆಯು ಕನ್ನಡವನ್ನು ಮೊದಲ ಭಾಷೆ ಯಾಗಿ ಕಲಿಸಲು ಹಿಂಜರಿಯುವುದು ಅಕ್ಷಮ್ಯ ಅಪರಾಧ.
ಸರ್ಕಾರಕ್ಕೆ ನಿಜವಾಗಿಯೂ ಭಾಷಾಭಿಮಾನವಿದ್ದರೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಕನ್ನಡ ಕಲಿಸದ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬೇಕು. ಗಡಿಭಾಗದ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟು, ಅನ್ಯಭಾಷಿಕರ ತುಷ್ಟೀಕರಣ ಮಾಡುವುದನ್ನು ಸರ್ಕಾರ ನಿಲ್ಲಿಸಲಿ.
– ಡಾ. ಎಚ್.ಕೆ.ವಿಜಯಕುಮಾರ್ ಬೆಂಗಳೂರು





