ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ ಮಾಧ್ಯಮವಾಗಿದೆ. ಕೇಂದ್ರ ಸರ್ಕಾರದ ಸ್ವಾಧೀನದಲ್ಲಿರುವ ಆಕಾಶವಾಣಿ ಮೈಸೂರು ಕೇಂದ್ರವು ಸದ್ಯ ೫ ಕಿಲೋ ವ್ಯಾಟ್ ಸಾಮರ್ಥ್ಯದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಈಗ ೧೦ ಕಿಲೋ ವ್ಯಾಟ್ ಸಾಮರ್ಥ್ಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರಸಾರ ಭಾರತಿಯಿಂದ ಅನುಮತಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮೈಸೂರಿನ ಯಾದವ ಗಿರಿಯಲ್ಲಿರುವ ಆಕಾಶವಾಣಿ ಕೇಂದ್ರ ಕೇವಲ ೧೦೦ ಮೀಟರ್ ಎತ್ತರದಲ್ಲಿದೆ, ಇದನ್ನು ಯಾದವಗಿರಿಯಿಂದ, ೧೫೦ ಮೀಟರ್ ಎತ್ತರದ ಟವರ್ ಇರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸ್ಥಳಾಂತರಿಸಿದರೆ, ತಮಿಳು ನಾಡು ಮತ್ತು ಕೇರಳ ಗಡಿಭಾಗದ ಕನ್ನಡಿಗರು ಕೂಡ ಮೈಸೂರು ಆಕಾಶವಾಣಿಯ ಗುಣಮಟ್ಟದ ಕಾರ್ಯಕ್ರಮವನ್ನು ಕೇಳಬಹುದು.
ಭದ್ರಾವತಿ ಆಕಾಶವಾಣಿ ಕೇಂದ್ರದ ಪ್ರಸಾರ ಸಾಮರ್ಥ್ಯವನ್ನು ಇತ್ತೀಚೆಗೆ ಹೆಚ್ಚಳ ಮಾಡಿದ್ದು, ಇದೇ ಮಾದರಿಯಲ್ಲಿ ಮೈಸೂರು ಆಕಾಶವಾಣಿ ಕೇಂದ್ರದ ಸಾಮರ್ಥ್ಯವನ್ನೂ ಹೆಚ್ಚಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕ್ರಮ ಕೈಗೊಳ್ಳುವುದು ಅಗತ್ಯ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





