ಸಾಂಪ್ರದಾಯಿಕ ಕೃಷಿ ಇಂದು ಹವಾಮಾನ ವೈಪರೀತ್ಯ ಮತ್ತು ಮಣ್ಣಿನ ಸವಕಳಿಯಿಂದ ಬಳಲುತ್ತಿದೆ.
ಇಂತಹ ಸಂದರ್ಭದಲ್ಲಿ ಹೈಡ್ರೋಪೋನಿಕ್ಸ್ ಕೇವಲ ತಂತ್ರಜ್ಞಾನವಲ್ಲ ಅದು ಕೃಷಿ ಲೋಕದ ಭವಿಷ್ಯದ ಆಶಾಕಿರಣ. ಈ ಪದ್ಧತಿಯಲ್ಲಿ ಕೇವಲ ಶೇ.೧೦ ನೀರನ್ನು ಬಳಸಿ ಶೇ.೪೦೦ ರಷ್ಟು ಇಳುವರಿ ಪಡೆಯಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಈ ಸ್ಮಾರ್ಟ್ ಕೃಷಿ ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು. ಸರ್ಕಾರವು ಕೃಷಿ ಕೇಂದ್ರಗಳಲ್ಲಿ ಹೈಡ್ರೋಪೋನಿಕ್ಸ್ ಟೆಕ್-ಪಾರ್ಕ್ಗಳನ್ನು ಸ್ಥಾಪಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಪೋಷಕಾಂಶಗಳ ಕಿಟ್ ಒದಗಿಸಬೇಕು. ಮುಖ್ಯವಾಗಿ ಕೀಟನಾಶಕ ಮುಕ್ತ ಬೆಳೆಗಳಿಗೆ ಪ್ರತ್ಯೇಕ ಪ್ರೀಮಿಯಂ ಮಾರುಕಟ್ಟೆ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಲಿ. ನಗರೀಕರಣದ ನಡುವೆಯೂ ಮಹಡಿ ಕೃಷಿ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ನಗರ ಕೃಷಿಯನ್ನು ಪ್ರೋತ್ಸಾಹಿಸಬಹುದು. ಕೇವಲ ಮಣ್ಣಿನ ಮೇಲಿನ ಅವಲಂಬನೆ ಬಿಟ್ಟು ವಿಜ್ಞಾನದ ಬಲದಿಂದ ರೈತರು ಸ್ವಾವಲಂಬಿಗಳಾಗಲು ಸರ್ಕಾರ ದಾರಿದೀಪವಾಗಬೇಕು.
ಈ ತಂತ್ರಜ್ಞಾನವು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರೈತನ ಹೊಲಕ್ಕೂ ತಲುಪಿದಾಗ ಮಾತ್ರ ನಿಜವಾದ ಕೃಷಿ ಸ್ವಾವಲಂಬನೆ ಸಾಧ್ಯ.
-ಡಾ. ಎಚ್.ಕೆ. ವಿಜಯಕುಮಾರ್,ಬೆಂಗಳೂರು





