ಅಭಿವೃದ್ಧಿಯ ಹೆಸರಿನಲ್ಲಿ ನಾವು ಪರಿಸರ ನಾಶ ಮಾಡಿದ್ದರ ಪರಿಣಾಮವಾಗಿ ಇಂದು ಪ್ರಕೃತಿ ವಿಕೋಪದಂತಹ ದುರಂತಗಳನ್ನು ಅನುಭವಿಸುತ್ತಿದ್ದೇವೆ. ದೇಶದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತ, ಪ್ರವಾಹಗಳನ್ನು ಸಂಭವಿಸುತ್ತಿದ್ದು, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರವಾಹ ನೂರಾರು ಜನರ ಜೀವ, ಜೀವನವನ್ನೇ ಕಸಿದು ಬಿಟ್ಟಿದೆ. ಕೆಲವು ಗ್ರಾಮಗಳೇ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಪ್ರಕೃತಿ ವಿಕೋಪದ ಭೀಕರತೆಯನ್ನು ತೋರುತ್ತದೆ. ಜನರು ತಮ್ಮ ಅವಶ್ಯಕತೆಗಳಿಗಾಗಿ ಪ್ರಕೃತಿಯ ಒಡಲನ್ನು ಬಗೆದು ನಾಶ ಮಾಡಿ, ಹಂತ ಹಂತವಾಗಿ ಕಾಡುಗಳನ್ನು ಕಡಿದು ನಗರಗಳನ್ನು ಸೃಷ್ಟಿಸಿ, ಬೆಟ್ಟಗಳನ್ನು ಕೊರೆದು ರಸ್ತೆಗಳನ್ನು ನಿರ್ಮಿಸಿದರು.
ತಮ್ಮ ಪ್ರತಿಯೊಂದೂ ಅಗತ್ಯತೆಗಳಿಗಾಗಿ ಪರಿಸರವನ್ನು ನಾಶ ಮಾಡಿದ ಪರಿಣಾಮ ಈಗ ಪ್ರಕೃತಿಯೇ ಮನುಷ್ಯನಿಗೆ ಪಾಠ ಕಲಿಸುತ್ತಿದೆ ಎನ್ನುವುದಕ್ಕೆ ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದ ವಯನಾಡು ದುರಂತವೇ ಸಾಕ್ಷಿ. ಇಂತಹ ಘಟನೆಗಳೆಂದ ನಾವು ಪಾಠ ಕಲಿತು, ಮುಂದಾದರೂ ಪರಿಸರವನ್ನು ಸಂರಕ್ಷಿಸುವುದನ್ನು ಕಲಿಯೋಣ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





